ಬೆಂಗಳೂರು:2002ನೇ ಸಾಲಿನಲ್ಲಿ ನಿಷೇಧಿಸಿದ್ದ ಛಾಪಾ ಕಾಗದಗಳನ್ನು ನಕಲಿ ಮಾಡಿ ಮುದ್ರಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ವಿವೇಕನಗರದ ಹಸ್ಸೈನ್ ಮೋದಿ ಬಾಬು (53) ಹಾಗೂ ಬಸವೇಶ್ವರ ನಗರ ನಿವಾಸಿ ಹರೀಶ್ (55) ಬಂಧಿತರು. ಪ್ರಕರಣ ಸಂಬಂಧ ಎಸ್.ಜೆ.ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಎಸ್ಪಿ ರಸ್ತೆಯಲ್ಲಿರುವ ಅಂಗಡಿಯಲ್ಲಿ ಆರೋಪಿಗಳು ನಕಲಿ ಛಾಪಾ ಕಾಗದ ತಯಾರಿಸುತ್ತಿದ್ದರು. ಅಂಗಡಿ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ' ಎಂದು ಪೊಲೀಸರು ತಿಳಿಸಿದರು.
'ಆರೋಪಿಗಳಿಂದ ₹ 2.71 ಕೋಟಿ ಮೌಲ್ಯದ 443 ಛಾಪಾ ಕಾಗದಗಳನ್ನು ಜಪ್ತಿ ಮಾಡಲಾಗಿದೆ' ಎಂದರು.
2002ರಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿರುವ ಛಾಪಾ ಕಾಗದಗಳನ್ನು ನಕಲಿ ಮಾಡಿ ಮಾರಾಟ ಮಾಡುತ್ತಿರುವುದಾಗಿ ಸುಳಿವು ಸಿಕ್ಕಿತ್ತು.
ಆಗ ಎಸಿಪಿ ನೇತೃತ್ವದ ತಂಡ ಅ. 3ರ ಬೆಳಗ್ಗೆ 10.30ರಲ್ಲಿ ಮಫ್ತಿಯಲ್ಲಿ ಅಂಗಡಿ ಬಳಿಗೆ ಹೋಗಿ ನಿಗಾ ವಹಿಸಿತ್ತು. ಅಷ್ಟೊತ್ತಿಗೆ ಗ್ರಾಹಕ ಹರೀಶ್, ನಕಲಿ ಛಾಪಾ ಕಾಗದ ಖರೀದಿ ಸಲುವಾಗಿ ಅಂಗಡಿ ಬಳಿಗೆ ಬಂದಿದ್ದು, ರೆಡ್ಹ್ಯಾಂಡ್ ಆಗಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ಛಾಪಾ ಕಾಗದ ಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ.
ಈ ನಕಲಿ ಛಾಪಾ ಕಾಗದಗಳನ್ನು ಬಳಸಿ 2002ರ ಹಿಂದೆ ನೋಂದಣಿ ಅಥವಾ ಒಪ್ಪಂದ ಮಾಡಿಕೊಂಡಿರುವ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡುತ್ತಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಥದ್ದೇ ಛಾಪಾ ಕಾಗದ ಹಗರಣದಲ್ಲಿ ಈ ಹಿಂದೆ ತೆಲಗಿ ಸೇರಿ ಹಲವರು ಸಿಕ್ಕಿಬಿದ್ದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.