ಯಲಹಂಕ: ಉದ್ದೇಶಿತ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಿಸಲು ಸ್ವಾಧೀನಪಡಿಸಿಕೊಂಡಿರುವ ಜಮೀನಿನಲ್ಲಿ ಬಿಡಿಎ ಅಧಿಕಾರಿಗಳು ಮನೆಗಳನ್ನು ತೆರವುಗೊಳಿಸಲು ಮುಂದಾದಾಗ, ರೊಚ್ಚಿಗೆದ್ದ ನೂರಾರು ರೈತರು ವೀರ
ಸಾಗರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಬಿಡಿಎ ಹಾಗೂ ಸರ್ಕಾರ ವಿರುದ್ಧ ಘೂಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಗುಂಪನ್ನು ಚದುರಿಸಿದರು. ಈ ವೇಳೆ ಹಲವು ರೈತಮುಖಂಡರನ್ನು ಪೊಲೀಸರು ಬಂಧಿಸಿದರು. ಜೆಡಿಎಸ್ ಮುಖಂಡ ಮುನೇಗೌಡ ಅವರನ್ನು ಪೊಲೀಸರು ಬಲವಂತವಾಗಿ ಬಂಧಿಸಲು ಮುಂದಾದರು. ಈ ವೇಳೆ ಪೊಲೀಸರು ಮತ್ತು ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ತಳ್ಳಾಟ-ನೂಕಾಟ ದಲ್ಲಿ ಮುನೇಗೌಡ ಅವರ ಅಂಗಿ ಹರಿದು ಹೋಯಿತು.
ನಂತರ ಮಾತನಾಡಿದ ಅವರು, ಬಿಡಿಎ ಸ್ವಾಧೀನಪಡಿಸಿಕೊಂಡಿರುವ ರೈತರ ಜಮೀನುಗಳಿಗೆ ಸೂಕ್ತ ಪರಿಹಾರ ಮತ್ತು ಮಾಹಿತಿ ನೀಡದೆ ಏಕಾಏಕಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಮೂಲಕ ತೆರವು ಕಾರ್ಯ ಆರಂಭಿಸಲಾಗಿದೆ. ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನಿಸಿದರೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತಮುಖಂಡ ರಾಮಗೊಂಡನಹಳ್ಳಿ ಎಂ.ರಮೇಶ್ ಮಾತನಾಡಿ, ರೈತರನ್ನು ಹೊರಗಿಟ್ಟು ಯೋಜನೆಯನ್ನು ಆರಂಭಿಸುತ್ತಿರುವ ಬಿಡಿಎ ಕ್ರಮವು ರೈತ ವಿರೋಧಿ ಧೋರಣೆಯಾಗಿದೆ ಎಂದು ದೂರಿದರು.
ರೈತಮುಖಂಡ ಮಾವಳಿಪುರ ಬಿ. ಶ್ರೀನಿವಾಸ್ ಮಾತನಾಡಿ, ಏಕಾಏಕಿ ರೈತರನ್ನು ಒಕ್ಕಲೆಬ್ಬಿಸಿ, ಆಶ್ರಯ ಮನೆಯ ಕಾಂಪೌಂಡ್ ಒಡೆಯುವ ಜತೆಗೆ ರೈತರು ತಮ್ಮ ತೋಟಗಳಲ್ಲಿ ಬೆಳೆದಿದ್ದ ಹೂಕೋಸು, ಟೊಮ್ಯಾಟೊ ಮತ್ತಿತರ ಬೆಳೆಗಳನ್ನು ನಾಶಪಡಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣ ದಾಖಲು:ಪೊಲೀಸರು ವಶಕ್ಕೆ ಪಡೆದಿದ್ದ ರೈತಮುಖಂಡರ ಪೈಕಿ ಒಟ್ಟು 17 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ರಾಮಗೊಂಡನಹಳ್ಳಿ ಎಂ.ರಮೇಶ್, ಬಸವರಾಜ ಪಾದಯಾತ್ರಿ, ಮುನಿರಾಜು, ಪಂಚಾಕ್ಷರಿ, ಸುರೇಶ್.ಕೆ, ಮುನಿ
ಆಂಜಿನಪ್ಪ, ಪ್ರಸನ್ನ, ಆನಂದ್, ವಸಂತ್ ವೀರಸಾಗರ ಸೇರಿ 9 ಜನರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಉಳಿದ 6 ಜನರನ್ನು ಠಾಣಾ ಜಾಮೀ ನಿನ ಮೇರೆಗೆ ಬಿಡುಗಡೆಗೊಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.