
ಬೆಂಗಳೂರು: ಆಸ್ತಿ ಕಲಹಕ್ಕೆ ಮಕ್ಕಳಿಂದಲೇ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಂದೆ, ಮೃತಪಟ್ಟ ಘಟನೆ ಇಂದಿರಾ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಧೂಪನಹಳ್ಳಿ ನಿವಾಸಿ ಮುನಿಕೃಷ್ಣಪ್ಪ (70) ಮೃತ ವ್ಯಕ್ತಿ. ಫೆಬ್ರವರಿ 14ರಂದು ರಾತ್ರಿ ಘಟನೆ ನಡೆದಿದ್ದು, ಆರೋಪಿಯಾಗಿರುವ ಪುತ್ರ ಮೋಹನ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಮಗ ಗಜೇಂದ್ರನಿಗೆ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎಂಟಿಸಿಯ ನಿವೃತ್ತ ಉದ್ಯೋಗಿಯಾಗಿದ್ದ ಮುನಿಕೃಷ್ಣಪ್ಪ, ಧೂಪನಹಳ್ಳಿಯಲ್ಲಿ ವಾಸವಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿ ತಂದೆ ಹಾಗೂ ಮಕ್ಕಳ ನಡುವೆ ಆಗಾಗ್ಗೆ ಕಲಹ ನಡೆಯುತ್ತಿತ್ತು. ಎರಡನೇ ಪುತ್ರ ಗಜೇಂದ್ರ ತನ್ನ ತಾಯಿಯೊಂದಿಗೆ ಪ್ರತ್ಯೇಕವಾಗಿ ವಾಸವಿದ್ದರು. ಮೊದಲ ಪುತ್ರ ಮೋಹನ್ ಕುಮಾರ್ ಮನೆಯ ಮೂರನೇ ಮಹಡಿಯಲ್ಲಿ ವಾಸವಿದ್ದರು. ಆಸ್ತಿ ಕಲಹ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಆಸ್ತಿ ವಿಚಾರ ಸಂಬಂಧ ಫೆಬ್ರವರಿ 14ರ ರಾತ್ರಿ ಮುನಿಕೃಷ್ಣಪ್ಪ ಅವರೊಂದಿಗೆ ಮಕ್ಕಳು ಗಲಾಟೆ ಮಾಡಿಕೊಂಡಿದ್ದರು. ಕೋಪದಲ್ಲಿ ಬೇಸ್ಬಾಲ್ ಬ್ಯಾಟ್, ಹಾಕಿ ಸ್ಟಿಕ್ನಿಂದ ಅವರ ಮೇಲೆ ಹಲ್ಲೆ ನಡೆಸಿದ್ದರು. ಮುನಿಕೃಷ್ಣಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸೊಸೆ ದಿವ್ಯಾ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.