ರಫ್ತು
ಬೆಂಗಳೂರು: ‘ರಾಜ್ಯದಲ್ಲಿ ರಫ್ತು ವಹಿವಾಟಿಗೆ ಪೂರಕ ವಾತಾವರಣವಿದ್ದು, ಸಣ್ಣ ಕೈಗಾರಿಕಾ ಕ್ಷೇತ್ರಗಳು ಇನ್ನಷ್ಟು ವಿಸ್ತಾರವಾಗಿ ಬೆಳೆಯಬೇಕಿವೆ’ ಎಂದು ವಿಟಿಪಿಸಿ ವ್ಯವಸ್ಥಾಪಕ ನಿರ್ದೇಶಕ ಬಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಕಾಸಿಯಾ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ(ವಿಟಿಪಿಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ‘ಲೀನ್, ಝೆಡ್ಇಡಿ ಮತ್ತು ರಫ್ತು’ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ(ಎಂಎಸ್ಎಂಇ) ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಹಾಗೂ ವೇಗಗೊಳಿಸುವ (ಆರ್ಎಎಂಪಿ–ರ್ಯಾಂಪ್) ಯೋಜನೆಯಡಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
‘ವಿಶ್ವಬ್ಯಾಂಕ್ ಮತ್ತು ಸರ್ಕಾರ ಜೊತೆಗೂಡಿ ಎಂಎಸ್ಎಂಇಗಳ ಕಾರ್ಯಕ್ಷಮತೆ ಹೆಚ್ಚಿಸುವ ಹಾಗೂ ವೇಗಕ್ಕೆ ಒತ್ತುನೀಡುವ ರ್ಯಾಂಪ್ ಯೋಜನೆಯನ್ನು ಜಾರಿಗೆ ತಂದಿವೆ. ಇದರಿಂದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಯನ್ನು ತಂತ್ರಜ್ಞಾನ, ಮಾರುಕಟ್ಟೆ ವ್ಯವಸ್ಥೆಗೆ ತಕ್ಕಂತೆ ಪರಿವರ್ತನೆಗೊಳಿಸಬಹುದಾಗಿದೆ ಎಂದು ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ (ಎಂಎಸ್ಎಂಇ ಆ್ಯಂಡ್ ಪಿಪಿ) ಹೆಚ್ಚುವರಿ ನಿರ್ದೇಶಕ ಮಾಣಿಕ್ ವಿ. ರಾಘೋಜಿ, ‘ರ್ಯಾಂಪ್ ಯೋಜನೆಯಡಿ ಇಂಥ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕಾಸಿಯಾ ಸಹಯೋಗದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ. ಇದರಿಂದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ತಿಳಿವಳಿಕೆ ನೀಡಲು ಸಹಕಾರಿಯಾಗಲಿದೆ’ ಎಂದರು.
ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್, ಡಿಐಸಿ ಜಂಟಿ ನಿರ್ದೇಶಕ ಸುನೀಲ್ ಕುಮಾರ್, ಉಪಾಧ್ಯಕ್ಷ ಗಣೇಶ್ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್. ಸಾಗರ್, ಜಂಟಿ ಕಾರ್ಯದರ್ಶಿ(ನಗರ) ಜೆ.ಎಸ್.ಬಾಬು, ಜಂಟಿ ಕಾರ್ಯದರ್ಶಿ(ಗ್ರಾಮೀನ) ಸತೀಶ್ ಎನ್., ಖಜಾಂಚಿ ಮಂಜುನಾಥ್ ಎನ್. ಹಾಗೂ ಕೈಗಾರಿಕೋದ್ಯಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.