ಬೆಂಗಳೂರು: ಪ್ರೇಮ ವಿವಾಹ ಸಂಬಂಧ ನಡೆದ ಹೊಡೆದಾಟದಲ್ಲಿ 45 ವರ್ಷದ ವ್ಯಕ್ತಿಯೊಬ್ಬರ ಮೇಲೆ ಕ್ರಿಕೆಟ್ ಸ್ಟಂಪ್ಗಳಿಂದ ಹಲ್ಲೆ ಮಾಡಿರುವ ಘಟನೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಮದುವೆಗೆ ಸಂಬಂಧಿಸಿದಂತೆ ಯುವತಿಯ ಮನೆಯವರು ಹುಡುಗನ ತಂದೆ ಜೊತೆ ಪದೇ ಪದೇ ಜಗಳ ತೆಗೆದು ಹೊಡೆದಾಟಕ್ಕೆ ಇಳಿಯುತ್ತಿದ್ದರು. ಹಲ್ಲೆಗೊಳಗಾದವರನ್ನು ಕೆನ್ನಿ ಎಂದು ಗುರುತಿಸಲಾಗಿದೆ. ಇವರ ಪುತ್ರ ನೆರೆಮನೆಯ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದೇ ಘಟನೆಗೆ ಕಾರಣ ಎಂದು ಕೋರಮಂಗಲ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.
ಕುಪ್ಪರಾಜು, ಮುರುಗ, ಶಕ್ತಿವೇಲು, ಮುರಳಿ ಹಾಗೂ ಸುಂದರ್ ಎಂಬುವರು ಹಲ್ಲೆ ನಡೆಸಿದ್ದಾಗಿ ಕೆನ್ನಿ ದೂರಿನಲ್ಲಿ ಆರೋಪಿಸಿದ್ದಾರೆ. ತಮ್ಮ ಮಗ ನೆರೆಮನೆಯ ಯುವತಿಯನ್ನು ಪ್ರೀತಿಸಿ ಇತ್ತೀಚೆಗೆ ಮದುವೆ ಆಗಿದ್ದರು. ಈ ಮದುವೆ ಹುಡುಗಿ ಮನೆಯವರಿಗೆ ಇಷ್ಟವಿರಲಿಲ್ಲ. ತಾವು ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿಯಲ್ಲಿದ್ದಾಗ ಆರೋಪಿಗಳು ದಾಳಿ ಮಾಡಿ ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ತಲೆ ಹಾಗೂ ಬೆನ್ನಿಗೆ ತೀವ್ರ ಗಾಯಗಳಾಗಿರುವ ಕೆನ್ನಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.