ADVERTISEMENT

ಕಾಮಗಾರಿ ಚುರುಕುಗೊಳಿಸಲು ಆಯುಕ್ತ ಸೂಚನೆ

ನಾಡಪ್ರಭು ಕೆಂಪೇಗೌಡ ಬಡಾವಣೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 5:13 IST
Last Updated 22 ನವೆಂಬರ್ 2020, 5:13 IST
ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾಮಗಾರಿಗಳನ್ನು ಬಿಡಿಎ ಆಯುಕ್ತ ಎಚ್‌.ಆರ್‌.ಮಹದೇವ ಅವರು ಶನಿವಾರ ಪರಿಶೀಲಿಸಿದರು. ಎಂಜಿನಿಯರಿಂಗ್‌ ಸದಸ್ಯ ಡಾ. ಎಚ್.ಆರ್. ಶಾಂತರಾಜಣ್ಣ ಹಾಗೂ ಇತರ ಅಧಿಕಾರಿಗಳು ಇದ್ದಾರೆ
ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾಮಗಾರಿಗಳನ್ನು ಬಿಡಿಎ ಆಯುಕ್ತ ಎಚ್‌.ಆರ್‌.ಮಹದೇವ ಅವರು ಶನಿವಾರ ಪರಿಶೀಲಿಸಿದರು. ಎಂಜಿನಿಯರಿಂಗ್‌ ಸದಸ್ಯ ಡಾ. ಎಚ್.ಆರ್. ಶಾಂತರಾಜಣ್ಣ ಹಾಗೂ ಇತರ ಅಧಿಕಾರಿಗಳು ಇದ್ದಾರೆ   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿಕೆಲವು ಕಡೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಆಗದಿದ್ದರೂ, ನಡೆದ ಕಾಮಗಾರಿಗಿಂತ ಹೆಚ್ಚು ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿ ಮಾಡಿದ್ದ ಬಗ್ಗೆ ದೂರುಗಳು ಬಂದಿದ್ದರಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಚ್‌.ಆರ್‌.ಮಹದೇವ ಅವರು ಶನಿವಾರ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದರು.

ಒಳಚರಂಡಿ, ಕುಡಿಯುವ ನೀರಿನ ಕೊಳವೆ ಅಳವಡಿಸುವಿಕೆ, ರಸ್ತೆ ಕಾಮಗಾರಿಗಳ ತಪಾಸಣೆ ನಡೆಸಿದರು. ಕಾಮಗಾರಿ ನಿರೀಕ್ಷಿತವ ವೇಗದಲ್ಲಿ ನಡೆಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಗಡುವಿನ ಒಳಗೆ ಬಡಾವಣೆಯ ಮೂಲಸೌಕರ್ಯ ಸಜ್ಜುಗೊಳಿಸಲು ಕ್ರಮ ಕೈಗೊಳ್ಳುವಂತೆ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

ಬಡಾವಣೆಯಲ್ಲಿ ತಮಗೆ ಹಂಚಿಕೆಯಾದ ನಿವೇಶನಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕೆಲವು ಫಲಾನುಭವಿಗಳು ಬದಲಿ ನಿವೇಶನ ನೀಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಫಲಾನುಭವಿಗಳು ನೀಡಿದದ ಕಾರಣದಲ್ಲಿ ನಿಜಾಂಶವಿದೆಯೇ ಎಂಬ ಬಗ್ಗೆಯೂ ಆಯುಕ್ತರು ಪರಿಶೀಲಿಸಿದರು.

ADVERTISEMENT

ಒಬ್ಬ ಫಲಾನುಭವಿಗೆ ಹಂಚಿಕಯಾಗಿದ್ದ ನಿವೇಶನದ ಪಕ್ಕದಲ್ಲಿ ಮೂಲಸೌಲಭ್ಯ ನಿವೇಶನವಿದ್ದು ಅದರಲ್ಲಿ ಭಾರಿ ಗಾತ್ರದ ಆಲದ ಮರವಿದೆ. ಅದರೆ ಕೊಂಬೆಗಳು ಫಲಾನುಭವಿಗೆ ಹಂಚಿಕೆಯಾದ ನಿವೇಶನಕ್ಕೆ ಚಾಚಿದ್ದವು. ನಿವೇಶನದ ಜಾಗ ಇಳಿಜಾರಿನಿಂದ ಕೂಡಿದೆ ಎಂಬ ಕಾರಣಕ್ಕೆ ಇನ್ನೊಬ್ಬರು ಫಲಾನುಭವಿ ಬದಲಿ ನಿವೇಶನಕ್ಕೆ ಅರ್ಜಿ ಹಾಕಿದ್ದರು. ಹಂಚಿಕೆಯಾದ ನಿವೇಶನ ಬಂಡೆಗಲ್ಲುಗಳಿಂದ ಕೂಡಿದೆ ಎಂಬ ಕಾರಣಕ್ಕೆ ಮತ್ತೊಬ್ಬರು ಬೇರೆ ನಿವೇಶನ ಹಂಚಿಕೆ ಮಾಡುವಂತೆ ಪ್ರಾಧಿಕಾರವನ್ನು ಕೋರಿದ್ದರು.ಸಮಸ್ಯೆ ಪರಿಹಾರಕ್ಕೆ ಆಯುಕ್ತರು ಮಾರ್ಗದರ್ಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.