ಬೆಂಗಳೂರು: ಬಿಬಿಎಂಪಿ ರಸ್ತೆ ವಿಸ್ತರಣೆ ವಿಭಾಗದಿಂದ ಪೂರ್ವಾನುಮತಿ ಪಡೆಯದೆ ಓಎಫ್ಸಿ ಕೇಬಲ್ ಅಳವಡಿಸಲು ಬನ್ನೇರು
ಘಟ್ಟ ಮುಖ್ಯರಸ್ತೆಯ ಕೆಲವೆಡೆ ಅಗೆದು, ಸರ್ಕಾರಕ್ಕೆ ₹ 6 ಲಕ್ಷ ನಷ್ಟ ಉಂಟು ಮಾಡಿದ ಆರೋಪದಲ್ಲಿ ಏರ್ಟೆಲ್ ಕಂಪನಿ ವಿರುದ್ಧ ಹುಳಿಮಾವು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಿಬಿಎಂಪಿ ಕೇಂದ್ರ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಸಿ. ಕೃಷ್ಣಕುಮಾರ್ ನೀಡಿದ ದೂರಿನ ಆಧಾರದಲ್ಲಿ ಕಂಪನಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
‘ಬನ್ನೇರುಘಟ್ಟ ಮುಖ್ಯರಸ್ತೆಯನ್ನು ಇತ್ತೀಚೆಗೆ ಅಭಿವೃದ್ಧಿಪಡಿಸಲಾಗಿದೆ. ಜಿಡಿ ಮರ ವೃತ್ತದಿಂದ ಕೋಳಿಫಾರಂ ಗೇಟ್ವರೆಗೆ ಆಯ್ದ ಭಾಗಗಳಲ್ಲಿ ಆರು ತಿಂಗಳ ಹಿಂದೆಯಷ್ಟೆ ಡಾಂಬರೀಕರಣ ಮಾಡಲಾಗಿದೆ. ಆದರೆ, ಏರ್ಟೆಲ್ ಕಂಪನಿಯವರು ಇದೇ 3ರಂದು ರಾತ್ರಿ ಬಿ.ಜಿ ರಸ್ತೆಯ ಅರಕೆರೆ ಸಿಗ್ನಲ್, ನಾರಾಯಣ ನೇತ್ರಾಲಯದ ಎದುರು, 11ರಂದು ಮೀನಾಕ್ಷಿ ಮಾಲ್ನ ಎದುರು, 13ರಂದು ಗೊಟ್ಟಿಗೆರೆ ಕ್ರಿಸ್ಟಲ್ ಬೇರಿಯರ್ ಅಪಾರ್ಟ್ಮೆಂಟ್ ಬಳಿ ಓಎಫ್ಸಿ ಕೇಬಲ್ ಅಳವಡಿಸಲು ರಸ್ತೆ ಅಗೆದಿದ್ದಾರೆ. ಇದರಿಂದ ಸುಮಾರು ₹ 6 ಲಕ್ಷ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಏರ್ಟೆಲ್ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೃಷ್ಣಕುಮಾರ್ ದೂರಿನಲ್ಲಿ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.