ADVERTISEMENT

ಕುಣಿಗಲ್‌ ಶಾಸಕರ ವಿರುದ್ಧದ ಪ್ರಕರಣಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 23 ಮೇ 2022, 20:04 IST
Last Updated 23 ಮೇ 2022, 20:04 IST

ಬೆಂಗಳೂರು:ಕೋವಿಡ್ ನಿಯಮ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕುಣಿಗಲ್ ಶಾಸಕ ಡಾ.ಎಚ್.ಡಿ ರಂಗನಾಥ್ ವಿರುದ್ಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ.

ಈ ಕುರಿತಂತೆ ಡಾ.ರಂಗನಾಥ್‌ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಪತ್ತು ನಿರ್ವಹಣಾ ಕಾಯ್ದೆ–2005ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಂತೆಯೇಕರ್ನಾಟಕ ಸಾಂಕ್ರಾಮಿಕ ಕಾಯಿಲೆಗಳು ಕಾಯ್ದೆ–2020 ಕಲಂ 5(4)ರ ಅಡಿಯಲ್ಲಿ ಸಂಜ್ಞೇಯ ಅಪರಾಧ ಎಂದು ಪರಿಗಣಿಸಿರುವ ಕಾರಣ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆಸಲ್ಲಿಸಲಾಗಿದೆ.

ADVERTISEMENT

ಕುಣಿಗಲ್‌ ಉಪ ವಿಭಾಗದ ಪೊಲೀಸ್ ಠಾಣೆ ಅಧಿಕಾರಿಗೆ ನೋಟಿಸ್‌ ಮತ್ತು ಪಡುವಗೆರೆ ಗ್ರಾಮದ ಜಾತ್ಯತೀತ ಜನತಾದಳದ ಮುಖಂಡ ಪಿ.ಎಚ್‌.ಗೋವಿಂದರಾಜು ಅವರಿಗೆ ತುರ್ತು ನೋಟಿಸ್‌ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಜೂನ್‌ 21ಕ್ಕೆ ನಿಗದಿಗೊಳಿಸಲಾಗಿದೆ.

ಪ್ರಕರಣವೇನು?: ಹುಲಿಯೂರು ದುರ್ಗ ಹೋಬಳಿ ಬಂಡಿಹಳ್ಳಿ ಬೈಪಾಸ್ ರಸ್ತೆಯಲ್ಲಿ ‍2021ರ ಜೂನ್‌ 18ರಂದು ಗ್ರಾಮದ ರಮೇಶ್‌ ಎಂಬ ವ್ಯಕ್ತಿ ಮಧ್ಯಾಹ್ನದ ವೇಳೆಯಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು.

ಈ ಘಟನೆ ನಡೆದ ನಂತರ ಕುಣಿಗಲ್‌ ಠಾಣೆಯ ಪೊಲೀಸರು ತತ್‌ಕ್ಷಣ ಕ್ರಮ ಕೈಗೊಂಡು ಶವ ಪರೀಕ್ಷೆಗೆ ಒಪ್ಪಿಸಿರಲಿಲ್ಲ. ವಿಷಯ ತಿಳಿದ ಕೂಡಲೇ ನಾನು ಸ್ಥಳಕ್ಕೆ ಧಾವಿಸಿದ್ದೆ. ಆಗ ಅಲ್ಲಿ ಜನಸ್ತೋಮವೇ ನೆರೆಯಿತು ಮತ್ತು ಈ ವೇಳೆ ಕೋವಿಡ್‌ ನಿಯಮಾವಳಿಗಳು ಜಾರಿಯಲ್ಲಿತ್ತು.

ಇದನ್ನೇ ನೆಪ ವಾಗಿಸಿಕೊಂಡು ಗೋವಿಂದರಾಜು ಮತ್ತು ಅವರ ಪಕ್ಷದವರು ಇದನ್ನು ರಾಜಕೀಯ ದುರು ದ್ದೇಶದಿಂದ; ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದ್ದಾರೆ.

ಕೋವಿಡ್‌ ನಿಯಮಾವಳಿ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ 2021ರ ಜೂನ್‌ 29ರಂದು ಕುಣಿಗಲ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದ್ದರಿಂದ. ಇದನ್ನು ರದ್ದುಗೊಳಿಸಬೇಕು’ ಡಾ.ರಂಗನಾಥ್‌ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.