
ದಾಬಸ್ಪೇಟೆ: ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿ ಗಂಗೇನಪುರ ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡವನ್ನು ವ್ಯಕ್ತಿಯೊಬ್ಬ ಕೆಡವಿದ್ದು, ಈ ಸಂಬಂಧ ಭಾನುಪ್ರಕಾಶ್ ಎಂಬಾತನ ವಿರುದ್ಧ ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲಾ ಮುಖ್ಯ ಶಿಕ್ಷಕಿ ನಾಗರತ್ನ ಅವರು ದೂರು ನೀಡಿದ್ದಾರೆ.
ಹಿಂದೆ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯಿತ್ತು. ಮಕ್ಕಳು ಕಡಿಮೆಯಾದ ನಂತರ 1995-96ರಲ್ಲಿ ಶಾಲೆಯನ್ನು ಕಿರಿಯ ಪ್ರಾಥಮಿಕ ಶಾಲೆಗಷ್ಟೇ ಸೀಮಿತಗೊಳಿಸಲಾಯಿತು. ಪ್ರಸ್ತುತ ಶಾಲೆಯಲ್ಲಿ ಇಬ್ಬರು ಶಿಕ್ಷಕರಿದ್ದು, ಸುಮಾರು 20 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯ ಕಟ್ಟಡವನ್ನು ಭಾನುಪ್ರಕಾಶ್ ಜೆಸಿಬಿಯಿಂದ ನೆಲಸಮ ಮಾಡಿದ್ದಾರೆ. ಅಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ಈ ಶಾಲೆಯಲ್ಲಿ ಓದಿದ ಅನೇಕರು ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಯಾವುದೇ ಅನುಮತಿ ಅಥವಾ ದಾಖಲೆ ಇಲ್ಲದೆ ಅದನ್ನು ಕೆಡವಲು ಇವರಿಗೆ ಅನುಮತಿ ಕೊಟ್ಟವರು ಯಾರು’ ಎಂದು ಪಂಚಾಯಿತಿ ಸದಸ್ಯ ದಿನೇಶ ನಾಯಕ ಪ್ರಶ್ನಿಸಿದ್ಧಾರೆ.
‘ಶಾಲೆಯ ಕಟ್ಟಡ ಶಿಕ್ಷಣ ಇಲಾಖೆಗೆ ಸೇರಿದ್ದು, 1995ರಿಂದ ಶಾಲೆಯ ಜಾಗ ನಮ್ಮದು ಎಂಬುದಕ್ಕೆ ನಮ್ಮ ಬಳಿ ದಾಖಲಾತಿ ಇದೆ. ಆದರೂ ಖಾಸಗಿ ವ್ಯಕ್ತಿ ಶಾಲೆಯನ್ನು ಕೆಡವಿದ್ದಾರೆ. ಈ ಕುರಿತು ಪೋಲಿಸ್ ಇಲಾಖೆಗೆ ದೂರು ನೀಡಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ ತಿಳಿಸಿದ್ದಾರೆ.
ದಾಬಸ್ಪೇಟೆ ಠಾಣೆಯ ಪೋಲಿಸ್ ಸಿಬ್ಬಂದಿ ಮತ್ತು ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.