ಬೆಂಗಳೂರು: ದೀಪಾವಳಿ ಹಬ್ಬದ ಮೂರು ದಿನಗಳಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಸ್ಪಿಸಿಬಿ) ತಿಳಿಸಿದೆ.
ದೀಪಾವಳಿಗಿಂತ ಮೊದಲು ಸಾಣೆಗುರುವನಹಳ್ಳಿ, ಹೆಬ್ಬಾಳ, ಜಯನಗರ, ಸೆಂಟ್ರಲ್ ಸಿಲ್ಕ್ ಬೋರ್ಡ್, ಕವಿಕಾ ಲೇಔಟ್, ನಗರ ರೈಲು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕ (ಎಕ್ಯುಐ) 100ರ ಒಳಗಿದ್ದವು. ಬಹುತೇಕ ಕಡೆಗಳಲ್ಲಿ ಎಕ್ಯುಐ ‘ಉತ್ತಮ’ ಅಂದರೆ 50ರ ಒಳಗಿತ್ತು. ಪಟಾಕಿಯ ಮಾಲಿನ್ಯಕಾರಕ ಹೊಗೆಯಿಂದಾಗಿ ಸೂಚ್ಯಂಕದಲ್ಲಿ ದಿಢೀರ್ ಏರಿಕೆ ಆಗಿದೆ. ಪಿಎಂ 10 ಹಾಗೂ ಪಿಎಂ 2.5 ಕಣಗಳಲ್ಲಿ ಭಾರಿ ವ್ಯತ್ಯಾಸ ಉಂಟಾಗಿದೆ. ನಗರದ ಬಹುತೇಕ ಕಡೆ ಒಂದು ಸಾವಿರ ಲೀಟರ್ ಗಾಳಿಯಲ್ಲಿ ಪಿಎಂ 10ರ ಪ್ರಮಾಣ 100 ಮೈಕ್ರೊ ಗ್ರಾಂ ಹಾಗೂ ಪಿಎಂ 2.5ರ ಪ್ರಮಾಣ 60 ಮೈಕ್ರೊ ಗ್ರಾಂ ಮೀರಿದೆ.
ವಾತಾವರಣದಲ್ಲಿ ತೇವಾಂಶ ಹೆಚ್ಚಾದರೆ ದೂಳಿನ ಕಣಗಳು ತಳಮಟ್ಟದಲ್ಲಿಯೇ ಗಾಳಿಯಲ್ಲಿ ತೇಲಾಡುತ್ತಿರುತ್ತವೆ. ಪಟಾಕಿಯ ವಿಷಕಾರಿ ಹೊಗೆ ಈ ಗಾಳಿಯನ್ನು ಸೇರಿದಾಗ ಮಲಿನಕಾರಕ ಕಣಗಳು ಗಾಳಿಯಲ್ಲಿ ಉಳಿಯುತ್ತವೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್ಪಿಸಿಬಿ) ಅಧಿಕಾರಿ ತಿಳಿಸಿದ್ದಾರೆ.
ಶಬ್ದವೂ ಹೆಚ್ಚಳ: ದೀಪಾವಳಿಗಿಂತ ಮೊದಲ ದಿನಗಳಿಗೆ ಹೋಲಿಸಿದರೆ ಹಬ್ಬದ ಸಮಯದಲ್ಲಿ ಶಬ್ದ ಮಾಲಿನ್ಯವೂ ಹೆಚ್ಚಾಗಿದೆ. ಬಿಟಿಎಂ ಲೇಔಟ್, ಬಸವೇಶ್ವರ ನಗರ, ಚರ್ಚ್ ಸ್ಟ್ರೀಟ್, ವಿಜಯನಗರ, ಜಯನಗರ, ಇಂದಿರಾನಗರ ಸೇರಿ ನಗರದ ವಿವಿಧೆಡೆ 14 ಮಾಪನ ಕೇಂದ್ರಗಳಿವೆ. ಸಾಮಾನ್ಯ ದಿನಗಳಲ್ಲಿ ಶಬ್ದದ ಡೆಸಿಬಲ್ಸ್ ಪ್ರಮಾಣ 55ರ ಆಸುಪಾಸಿನಲ್ಲಿ ಇದ್ದರೆ, ಹಬ್ಬದ ದಿನಗಳಲ್ಲಿ ಬಹುತೇಕ ಕಡೆ 65ರ ಗಡಿ ದಾಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.