ADVERTISEMENT

ರೌಡಿಶೀಟರ್‌ ಮಹೇಶ್‌ನ ಐವರು ಸಹಚರರ ಬಂಧನ

ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 18 ಜೂನ್ 2023, 15:01 IST
Last Updated 18 ಜೂನ್ 2023, 15:01 IST
ಬಂಧಿತ ಐವರು ಆರೋಪಿಗಳು.
ಬಂಧಿತ ಐವರು ಆರೋಪಿಗಳು.   

ಬೆಂಗಳೂರು: ಸಾರ್ವಜನಿಕರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ, ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್‌ ಮಹೇಶ್ ಅಲಿಯಾಸ್‌ ಸಿದ್ದಾಪುರ ಮಹೇಶ್‌ನ ಐವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯ ಪಕ್ಕದ ಬಿಟಿಎಸ್‌ ಸರ್ವೀಸ್‌ ರಸ್ತೆಯಲ್ಲಿ ಒಂಟಿಯಾಗಿ ತೆರಳುವ ನಾಗರಿಕರನ್ನು ಬೆದರಿಸುತ್ತಿದ್ದರು. ಐವರು ಆರೋಪಿಗಳು ಲಾಂಗ್‌, ಮಚ್ಚು ಹಾಗೂ ದೊಣ್ಣೆಗಳಿಂದ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ, ಸುಲಿಗೆ ಮಾಡುತ್ತಿದ್ದರು. ಮಾರಕಾಸ್ತ್ರ ಹಾಗೂ ಫಾರ್ಚೂನರ್‌ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಐವರು ಆರೋಪಿಗಳೂ ಕಳೆದ ವರ್ಷ ಬನಶಂಕರಿ ಮೆಟ್ರೊ ನಿಲ್ದಾಣದ ಬಳಿ ರೌಡಿಶೀಟರ್‌ ಮದನ್‌ ಎಂಬಾತನ ಕೊಲೆ ಮಾಡಿದ್ದ ಮಹೇಶ್‌ ಸಹಚರರು ಎಂದು ತನಿಖೆ ವೇಳೆ ಗೊತ್ತಾಗಿದೆ. ವಿಲ್ಸನ್‌ಗಾರ್ಡನ್‌ ನಾಗ ಹಾಗೂ ಆತನ ಸಹಚರರು ಹೊಡೆಯಲು ಹೊಂಚು ಹಾಕಿ ನಿಂತಿದ್ದರು. ಆ ವೇಳೆ ಅವರನ್ನು ಬಂಧಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.