ಬೆಂಗಳೂರು: ಪಂಚೆ ಕಟ್ಟಿ ಕುಸ್ತಿಯ ಅಖಾಡಕ್ಕಿಳಿದ ಯುವತಿಯರು ಕಸರತ್ತು ಪ್ರದರ್ಶಿಸಿದರು. ಪುರುಷರಿಗಿಂತ ತಾವೇನು ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿ, ಗ್ರಾಮ ದೇವತೆಯ ತೇರನ್ನು ಎಳೆದರು. ಜಾನಪದ ಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜು ಆಯೋಜಿಸಿದ್ದ ‘ಜಾನಪದ ಜಾತ್ರೆ’ಯಲ್ಲಿ ವಿದ್ಯಾರ್ಥಿನಿಯರು ಗ್ರಾಮೀಣ ಪ್ರಪಂಚ ಅನಾವರಣ ಮಾಡಿದರು. ಜಾನಪದ ನೃತ್ಯ ವೈಭವಕ್ಕೆ ಮನಸೋತ ವಿದ್ಯಾರ್ಥಿನಿಯರು ಗೋ ಶಾಲೆ, ಸಂತೆ, ಪಂಚಾಯಿತಿ ಕಟ್ಟೆ, ಅರವಟ್ಟಿಕೆ, ಒಟ್ಟು ಕುಟುಂಬದ ಮನೆಯನ್ನು ಬೆರಗು ಕಣ್ಣಿನಿಂದ ವೀಕ್ಷಿಸಿದರು.
ದೇಸಿ ಆಹಾರ ಮಳಿಗೆಗಳಲ್ಲಿನ ಬಗೆ ಬಗೆಯ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತಿದ್ದವು. ಸೋಲಿಗರ ಕುಣಿತ, ಸುಗ್ಗಿ ಕುಣಿತ, ಜೋಗತಿ ಕುಣಿತ, ಲಂಬಾಣಿ ನೃತ್ಯ, ಕರಗ, ಪೂಜಾ ಕುಣಿತ, ಯಕ್ಷಗಾನ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ಮನಸೂರೆಗೊಂಡವು.
ಜನರನ್ನು ಒಗ್ಗೂಡಿಸುವ ಕಲೆ: ‘ರಾಜಕಾರಣ ಜನರನ್ನು ಒಡೆದರೆ, ಜಾನಪದ ಕಲೆ ಜನರನ್ನು ಒಗ್ಗೂಡಿಸುತ್ತದೆ. ಬಹುತ್ವದ ಪ್ರಜ್ಞೆಯನ್ನು ಬೆಳೆಸುವ ಜಾನಪದ ಸಂಸ್ಕೃತಿಯನ್ನು ಉಳಿಸಬೇಕು. ಬರಹರಹಿತ ಸಂಸ್ಕೃತಿಯಾಗಿರುವಜಾನಪದದಂತಹ ಅಪೂರ್ವ ಶಕ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು’ ಎಂದುಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಗಾಯಕರಾದ ಗುರುರಾಜ ಹೊಸಕೋಟೆ, ಸವಿತಾ ಗಣೇಶ್, ಪಿಚ್ಚಳ್ಳಿ ಶ್ರೀನಿವಾಸ್ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.