ಬೆಂಗಳೂರು: ಅನ್ನಭಾಗ್ಯ ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (ಎನ್ಎಫ್ಎಸ್ಎ) ಯೋಜನೆಗಳ ಆಹಾರ ಧಾನ್ಯ ಸಾಗಣೆ ವೆಚ್ಚದ ಬಿಲ್ ಐದು ತಿಂಗಳಿನಿಂದ ಪಾವತಿ ಮಾಡದೇ ಇರುವುದನ್ನು ಖಂಡಿಸಿ, ರಾಜ್ಯ ಪಡಿತರ ಆಹಾರ ಧಾನ್ಯಗಳ ಸಗಟು ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘವು ಆಹಾರಧಾನ್ಯ ಪೂರೈಕೆಯನ್ನು ಸೋಮವಾರದಿಂದ ಸ್ಥಗಿತಗೊಳಿಸಿದೆ.
‘ಫೆಬ್ರುವರಿಯಿಂದ ಜೂನ್ವರೆಗೆ ‘ಅನ್ನಭಾಗ್ಯ ಯೋಜನೆ’ ಹಾಗೂ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಎನ್ಎಫ್ಎಸ್ಎ ಯೋಜನೆಯಡಿಯಲ್ಲಿ ಆಹಾರ ಧಾನ್ಯ ಸಾಗಣೆಗೆ ಮಾಡಿರುವ ವೆಚ್ಚವನ್ನು ಸರ್ಕಾರ ಪಾವತಿ ಮಾಡಿಲ್ಲ. ಹೀಗಾದರೆ ಗುತ್ತಿಗೆ ಪಡೆದಿರುವ ಲಾರಿ ಮಾಲೀಕರು ಬದುಕುವುದು ಹೇಗೆ’ ಎಂದು ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಪ್ರಶ್ನಿಸಿದ್ದಾರೆ.
‘4,500 ಲಾರಿಗಳು ಪ್ರತಿ ತಿಂಗಳಿಗೆ 4.5 ಲಕ್ಷ ಟನ್ನಂತೆ ಐದು ತಿಂಗಳು ಸುಮಾರು 25 ಲಕ್ಷ ಟನ್ ಆಹಾರ ಧಾನ್ಯ ಸಾಗಣೆ ಮಾಡಿವೆ. ಬಾಕಿ ಮೊತ್ತ ಪಾವತಿಸುವಂತೆ ನಾವು ಕಳೆದ ತಿಂಗಳು ಕೋರಿದಾಗ ನಮ್ಮನ್ನು ಮಾತುಕತೆಗೆ ಕರೆದಿದ್ದರು. ಜೂನ್ 25ರ ಒಳಗೆ ₹250 ಕೋಟಿಯಲ್ಲಿ ₹100 ಕೋಟಿ ಪಾವತಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಒಂದು ರೂಪಾಯಿಯನ್ನು ಕೂಡ ಬಿಡುಗಡೆ ಮಾಡಿಲ್ಲ’ ಎಂದು ತಿಳಿಸಿದ್ದಾರೆ.
9 ತಿಂಗಳ ಹಿಂದೆ ಸಾಗಾಣಿಕೆ ಟೆಂಡರ್ಗಳಲ್ಲಿ ಭಾಗವಹಿಸುವಾಗ ನೀಡಿದ್ದ ಇಎಂಡಿ ಮೊತ್ತವನ್ನು ಬ್ಯಾಂಕ್ ಗ್ಯಾರಂಟಿ ನೀಡಿದ ಮೇಲೂ ಗುತ್ತಿಗೆದಾರರಿಗೆ ಮರುಪಾವತಿ ಮಾಡಿಲ್ಲ. ಟೆಂಡರ್ ಆಗದವರಿಗೂ ಇಎಂಡಿ ಹಣ ಹಿಂತಿರುಗಿಸಿಲ್ಲ. ಇದುವೇ ಸುಮಾರು ₹25 ಕೋಟಿ ಮರು ಪಾವತಿ ಬಾಕಿ ಇದೆ ಎಂದು ಹೇಳಿದ್ದಾರೆ.
‘₹250 ಕೋಟಿ ಬಿಡುಗಡೆ ಆಗುವವರೆಗೂ ನಾವು ಆಹಾರ ಧಾನ್ಯ ಪೂರೈಸುವುದಿಲ್ಲ. ಮುಷ್ಕರವು ಅನಿರ್ದಿಷ್ಟಾವಧಿ ಮುಂದುವರಿಯಲಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.