
ರಾಜ್ಯಮಟ್ಟದ ಮುಜರಾಯಿ ಅರ್ಚಕರ ವಿಚಾರಸಂಕಿರಣದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಶ್ರೀವತ್ಸ ಮನವಿ ಸಲ್ಲಿಸಿದರು ಕಾಂಗ್ರೆಸ್ ಮುಖಂಡ ಉದಯ್ ಶಂಕರ್, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಎಚ್. ಇದ್ದರು. ಪ್ರಜಾವಾಣಿ ಚಿತ್ರ
ಬೆಂಗಳೂರು: ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರವನ್ನು ಶೀಘ್ರದಲ್ಲಿ ರಚಿಸಿ ಚಾಮುಂಡೇಶ್ವರಿ ದೇವಸ್ಥಾನ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘವು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮುಜರಾಯಿ ಅರ್ಚಕರ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಅರ್ಚಕರಿಗೆ ತಸ್ತೀಕ್ (ವರ್ಷಾಸನ) ₹ 12 ಸಾವಿರ ಇತ್ತು. 2013ರಲ್ಲಿ ಸಿದ್ದರಾಮಯ್ಯ ₹ 24 ಸಾವಿರಕ್ಕೆ ಏರಿಸಿದರು. 2015ರಲ್ಲಿ ₹ 12 ಸಾವಿರ, 2017ರಲ್ಲಿ ₹ 12 ಸಾವಿರ ಏರಿಸಿದ್ದರಿಂದ ಈ ಮೊತ್ತ ₹ 48 ಸಾವಿರ ಆಗಿತ್ತು. ಈ ಬಾರಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದಾಗ ₹ 12 ಸಾವಿರ ಹೆಚ್ಚಳ ಮಾಡಿದ್ದರಿಂದ ತಸ್ತೀಕ್ ₹ 60 ಸಾವಿರ ಆಗಿದೆ. ನಮ್ಮ ಸರ್ಕಾರ ಅರ್ಚಕರ ಜೊತೆಗಿದೆ’ ಎಂದು ಹೇಳಿದರು.
‘ತಸ್ತೀಕ್ ಪಡೆಯಲು ಅರ್ಚಕರನ್ನು ಅಧಿಕಾರಿಗಳು ಅಲೆದಾಡಿಸುತ್ತಾರೆ. ಅದನ್ನು ತಪ್ಪಿಸಲು ಆ್ಯಪ್ ರೂಪಿಸಲಾಗಿದೆ. ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡು, ನೇರವಾಗಿ ಸಂಬಂಧಪಟ್ಟವರಿಗೇ ಹಣ ತಲುಪುವಂತೆ ಮಾಡಲಾಗುತ್ತಿದೆ’ ಎಂದರು.
‘ಅರ್ಚಕರಿಗೆ ತಿಂಗಳ ಗೌರವಧನ ನೀಡಬೇಕು ಎಂಬುದೂ ಸೇರಿದಂತೆ ನಿಮ್ಮ ಬೇಡಿಕೆಗಳ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲಾಗುವುದು. ಈ ಸಭೆಯಲ್ಲಿ ನಿಮ್ಮ ಸಂಘದಿಂದ 10 ಪದಾಧಿಕಾರಿಗಳು ಭಾಗವಹಿಸಬಹುದು. ಆರ್ಥಿಕ ಇಲಾಖೆಯು ಮುಖ್ಯಮಂತ್ರಿ ಅವರಲ್ಲೇ ಇರುವುದರಿಂದ ಅವರ ಜೊತೆಗೂ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಶ್ರೀವತ್ಸ, ಪ್ರಧಾನ ಕಾರ್ಯದರ್ಶಿ ರಾಮತೀರ್ಥನ್, ಮುಜರಾಯಿ ಇಲಾಖೆಯ ಅಧಿಕಾರಿಗಳು ಮಾತನಾಡಿದರು.
‘ದೇವಸ್ಥಾನದ ಹಣ ಮಸೀದಿ ಚರ್ಚ್ಗೆ ಇಲ್ಲ’ ದೇವಸ್ಥಾನದ ಆದಾಯವನ್ನು ಮಸೀದಿಗೆ ಚರ್ಚ್ಗೆ ಬಳಸಲಾಗುತ್ತದೆ ಎಂದು ವಾಟ್ಸ್ಆ್ಯಪ್ ಯೂನಿವರ್ಸಿಟಿಯ ಕಿಡಿಗೇಡಿಗಳು ಹಬ್ಬಿಸುವ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಧರ್ಮದಾಯ ದತ್ತಿ ನಿಯಮ ಪ್ರಕಾರ ದೇವಸ್ಥಾನದ ಆದಾಯ ಬೇರೆಡೆ ಬಳಸಲು ಅವಕಾಶವಿಲ್ಲ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಈ ನಿಯಮವನ್ನು ಜಾರಿ ಮಾಡಲಾಗಿದೆ. ಒಂದು ದೇವಸ್ಥಾನದ ಆದಾಯವನ್ನು ಚರ್ಚ್ ಮಸೀದಿ ಬಿಡಿ ಇನ್ನೊಂದು ದೇವಸ್ಥಾನಕ್ಕೂ ಬಳಸುವಂತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.