ಹೆಸರಘಟ್ಟ: ‘ಸರ್ಕಾರವೇ ರೈತರಿಗೆ ವಂಚನೆ ಮಾಡಿದೆ’ ಎಂದು ಕೆಂಪನಹಳ್ಳಿ ಗ್ರಾಮಸ್ಥರು ಆರೋಪಿಸಿದರು.
ದೊಡ್ಡಬ್ಯಾಲಕೆರೆ ಗ್ರಾಮದಲ್ಲಿ ಶಿವರಾಮ ಕಾರಂತ ಬಡಾವಣೆ ಹೋರಾಟ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಬಿಡಿಎ ಅಧಿಕಾರಿಗಳ ವಿರುದ್ದ ನಡೆಸುತ್ತಿರುವ ಸತ್ಯಾಗ್ರಹದಲ್ಲಿಈ ಆರೋಪ ಕೇಳಿ ಬಂದಿತು.
ಗ್ರಾಮದ ನಿವಾಸಿ ಪಂಚಾಕ್ಷರಿ ಮಾತನಾಡಿ, ‘2.1 ಎಕರೆ ಗುಂಟೆ ಜಾಗದಲ್ಲಿ ಗುಲಾಬಿ ಬೆಳೆದು ವಿದೇಶಕ್ಕೆ ರಪ್ತು ಮಾಡುತ್ತಿದ್ದೆ. ಕೇಂದ್ರ ಸರ್ಕಾರದ ತೋಟಗಾರಿಕೆ ಇಲಾಖೆಯು 2007ರಲ್ಲಿ ಪ್ರೋತ್ಸಾಹ ಧನ ನೀಡುವ ಭರವಸೆ ನೀಡಿತ್ತು. 2010ರಲ್ಲಿ ಅಂತರರಾಷ್ಟ್ರೀಯ ಹೂಡಿಕೆದಾರರ ಸಮ್ಮೇಳನದಲ್ಲಿ ಕರ್ನಾಟಕ ಸರ್ಕಾರ ನನ್ನ ಗ್ಲೋಬಲ್ ಕಂಪನಿ ಜೊತೆ ಗುಲಾಬಿ ಹೂಗಳ ರಪ್ತಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಉದ್ಯೋಗ ಮಿತ್ರ ಯೋಜನೆಯಲ್ಲಿ ಹೂಗಳ ರಪ್ತಿಗೆ ಅನುಮತಿ ನೀಡಿತ್ತು. ಅದಕ್ಕಾಗಿ ನಾನು ಯಶವಂತಪುರ ಸಿಂಡಿಕೇಟ್ ಬ್ಯಾಂಕ್ನಲ್ಲಿ 2 ಕೋಟಿ ಸಾಲ ಪಡೆದೆ. ಈಗ ನನ್ನ ಸ್ಥಿತಿ ಅತಂತ್ರವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ಸರ್ಕಾರವೇ ಹೂಗಳನ್ನು ರಪ್ತು ಮಾಡಲು ಗುಣಮಟ್ಟ ಕಾಯ್ದುಕೊಳ್ಳಲು ಹೇಳಿ,ಈಗ ಭೂಸ್ವಾಧೀನ ಮಾಡಿಕೊಂಡರೆ ಎರಡು ಕೋಟಿ ಸಾಲವನ್ನು ತೀರಿಸುವ ಮಾರ್ಗ ಯಾವುದು? ಎನ್ನುವುದನ್ನು ಸರ್ಕಾರವೇ ಹೇಳಬೇಕು. ಬಿಡಿಎ ಅಧಿಕಾರಿಗಳ ಭ್ರಷ್ಟಾಚಾರದಿಂದ ನನ್ನ ಸಂಸಾರ ಬೀದಿಗೆ ಬೀಳುತ್ತಿದೆ’ ಎಂದು ಅವರು ಹತಾಶೆಯಿಂದ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.