
ಬೆಂಗಳೂರು: ಪುಲಕೇಶಿನಗರ ಉಪ ವಿಭಾಗದ ವ್ಯಾಪ್ತಿಯ ಫ್ರೇಜರ್ ಟೌನ್ ಕೆಂಚಪ್ಪ ಅಡ್ಡರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಮಹಡಿಗಳ ತೆರವು ಕಾರ್ಯಾಚರಣೆಯನ್ನು ಬೆಂಗಳೂರು ಉತ್ತರ ನಗರ ಪಾಲಿಕೆ ಅಧಿಕಾರಿಗಳು ಆರಂಭಿಸಿದ್ದಾರೆ.
ನೆಲ ಮತ್ತು ಎರಡು ಮಹಡಿಗಳನ್ನು ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಿಸಲಾಗಿತ್ತು. ಯಾವುದೇ ಪರವಾನಗಿ ಪಡೆಯದೇ ಹೆಚ್ಚುವರಿ ಎರಡು ಮಹಡಿಗಳನ್ನು ನಿರ್ಮಿಸಲಾಗಿತ್ತು. ಪ್ಯಾರಫಿಟ್ ಗೋಡೆಗಳನ್ನು ಮತ್ತು ಹೆಚ್ಚುವರಿ ಮಹಡಿಗಳನ್ನು ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ.
ನಿರ್ಮಾಣ ಕಾರ್ಯವನ್ನು ಅರ್ಧದಲ್ಲಿ ನಿಲ್ಲಿಸುವಂತೆ, ಅನಧಿಕೃತ ಅಂತಸ್ತುಗಳನ್ನು ತೆರವುಗೊಳಿಸುವಂತೆ ಸ್ವತ್ತು ಸಂಖ್ಯೆ 18/3ರ ಕಟ್ಟಡದ ಮಾಲೀಕರಿಗೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಲವು ಬಾರಿ ನೋಟಿಸ್ ನೀಡಿದ್ದರು. ಆದರೂ ಕಟ್ಟಡ ನಿರ್ಮಾಣ ಕಾರ್ಯ ಮುಂದುವರಿಸಿದ್ದರು.
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ನಿರ್ದೇಶನದಂತೆ ಪುಲಕೇಶಿನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ತಿಪ್ಪೇಸ್ವಾಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿ ವಡ್ಡರ್, ಪೋಲೀಸ್ ಸಿಬ್ಬಂದಿ ಉಪಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.