ADVERTISEMENT

ಬೆಂಗಳೂರು: 100 ಶಿಕ್ಷಕರಿಗೆ ಉಚಿತ ಮಂಡಿ ಚಿಪ್ಪು ಬದಲಿ ಶಸ್ತ್ರಚಿಕಿತ್ಸೆ

ಶಿಕ್ಷಕರ ದಿನಾಚರಣೆ ಪ್ರಯುಕ್ತ ಸ್ಪರ್ಶ್ ಫೌಂಡೇಷನ್‌ನಿಂದ ಗುರು ನಮನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 14:13 IST
Last Updated 6 ಸೆಪ್ಟೆಂಬರ್ 2023, 14:13 IST
ನಿವೃತ್ತ ಶಿಕ್ಷಕರಿಗೆ ಡಾ.ಶರಣಪ್ರಕಾಶ್ ಪಾಟೀಲ ಶುಭಹಾರೈಸಿದರು. ಡಾ.ಶರಣ್ ಶಿವರಾಜ್ ಪಾಟೀಲ ಇದ್ದಾರೆ.
ನಿವೃತ್ತ ಶಿಕ್ಷಕರಿಗೆ ಡಾ.ಶರಣಪ್ರಕಾಶ್ ಪಾಟೀಲ ಶುಭಹಾರೈಸಿದರು. ಡಾ.ಶರಣ್ ಶಿವರಾಜ್ ಪಾಟೀಲ ಇದ್ದಾರೆ.   

ಬೆಂಗಳೂರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ಇಲ್ಲಿನ ಸ್ಪರ್ಶ್ ಆಸ್ಪತ್ರೆಗಳ ಸಮೂಹದ ದತ್ತಿ ವಿಭಾಗದ ಸ್ಪರ್ಶ್ ಫೌಂಡೇಶನ್ ನೂರಕ್ಕೂ ಅಧಿಕ ನಿವೃತ್ತ ಶಿಕ್ಷಕರಿಗೆ ಉಚಿತವಾಗಿ ಮಂಡಿ ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಿತು. 

ನಗರದಲ್ಲಿ ಹಮ್ಮಿಕೊಂಡ ‘ಗುರುನಮನ’ ಕಾರ್ಯಕ್ರಮದಡಿ ಈ ಕಾರ್ಯ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಚಾಲನೆ ನೀಡಿ ಮಾತನಾಡಿದರು.

‘ಮೊಣಕಾಲು ನೋವು ಮತ್ತು ಸಂಧಿವಾತವು ವ್ಯಕ್ತಿಯನ್ನು ದುರ್ಬಲಗೊಳಿಸುತ್ತದೆ. ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುತ್ತದೆ. ಈ ರೀತಿಯ ಉದಾತ್ತ ಯೋಜನೆಗಳು ಶಿಕ್ಷಕರ ಜೀವನದ ಗುಣಮಟ್ಟವನ್ನು ಸುಧಾರಿಸುತ್ತವೆ. ಗುರು ನಮನದಂತಹ ಸಾಮಾಜಿಕ ಬದಲಾವಣೆಯ ಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದೆ ಬರುವ ವೈದ್ಯರು ಮತ್ತು ಆರೋಗ್ಯ ಸೇವಾ ಸಂಸ್ಥೆಗಳಿಗೆ ಸರ್ಕಾರದ ವತಿಯಿಂದ ಉತ್ತೇಜನ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

ಸ್ಪರ್ಶ್ ಆಸ್ಪತ್ರೆಯ ಅಧ್ಯಕ್ಷ ಡಾ.ಶರಣ್ ಶಿವರಾಜ್ ಪಾಟೀಲ, ‘ವ್ಯಕ್ತಿಯನ್ನು ಉತ್ತಮ ನಾಗರಿಕನನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಯುವ ಮನಸ್ಸುಗಳನ್ನು ಮತ್ತು ನಮ್ಮ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಅವರ ಕೊಡುಗೆ ಅಪಾರ. ‌ಹಾಗಾಗಿ, ಈ ಕಾರ್ಯಕ್ರಮವನ್ನು 2010ರಲ್ಲಿ ಪ್ರಾರಂಭಿಸಲಾಯಿತು’ ಎಂದು ತಿಳಿಸಿದರು.

‘ಸಂಧಿವಾತ ಸಮಸ್ಯೆಯಿಂದ ಅಂಗವಿಕಲತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ದೇಶದಲ್ಲಿ 1.8 ಕೋಟಿಗೂ ಹೆಚ್ಚು ಜನರು ಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಸ್ಥಿ ಸಂಧಿವಾತವನ್ನು ಗುಣಪಡಿಸಬಹುದಾಗಿದೆ. ಆದರೆ, ಮಂಡಿ ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ದುಬಾರಿಯಾಗಿರುವುದರಿಂದ ಇದು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು. 

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ವಿ. ಪಾಟೀಲ ಅವರು ಸ್ಪರ್ಶ್ ಫೌಂಡೇಶನ್‌ನ ನೂತನ ವೆಬ್‌ಸೈಟ್‌ಗೆ ಚಾಲನೆ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.