ಬೆಂಗಳೂರು: ‘ದುಡಿಯುವ ಜನರನ್ನು ಚಪ್ಪಲಿಯಂತೆ ನೋಡುತ್ತಾರೆ. ಅದಕ್ಕಾಗಿ ಜ್ಞಾನದ ಸಂಕೇತವಾದ ಜ್ಯೋತಿಯನ್ನು ಚಪ್ಪಲಿ ಹಾಕಿಕೊಂಡೇ ಬೆಳಗುತ್ತೇನೆ. ಇದು ದುರಹಂಕಾರವಲ್ಲ, ಶೋಷಿತ ಜನರ ಪರವಾದ ಧ್ವನಿ’ ಎಂದು ಹಂಪಿ ವಿಶ್ವವಿದ್ಯಾಲಯ ನಿವೃತ್ತ ಕುಲಪತಿ ಮಲ್ಲಿಕಾ ಘಂಟಿ ಹೇಳಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕನ್ನಡ ಕ್ರಿಯಾ ಸಮಿತಿ 10ನೇ ರಾಜ್ಯ ಮಟ್ಟದ ಮಹಾಧಿವೇಶನದಲ್ಲಿ ಅವರು ಮಾತನಾಡಿದರು.
'ಸಮಾಜದ ಮೇಲೆ ಬೆಳಕು ಚೆಲ್ಲುವ ಮಾತುಗಳನ್ನು ಆಡಿದರೆ ಪ್ರಕರಣ ದಾಖಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇಂಥ ವಾಕ್ಸ್ವಾತಂತ್ರ್ಯ ಎಲ್ಲರಿಗೂ ಸಿಗಬೇಕು' ಎಂದು ಆಶಯ ವ್ಯಕ್ತಪಡಿಸಿದರು.
‘ನಾನು ಕೂಡ ಆರಂಭದಲ್ಲಿ ಕೆಎಸ್ಆರ್ಟಿಸಿ ನೌಕರಳಾಗಿ ಕೆಲಸ ಮಾಡುತ್ತಿದ್ದೆ. ಆಗ ಹೋರಾಟಗಳಿಗೆ ಸರ್ಕಾರಗಳು ಮಣಿಯುತ್ತಿದ್ದವು. ಈಗ ಹತ್ತಿಕ್ಕುವ ಕೆಲಸಗಳಾಗುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ‘ಕನ್ನಡ ತಾಯಿಯ ಸೇವೆ ಮಾಡುತ್ತಿರುವ ಕೆಎಸ್ಆರ್ಟಿಸಿ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಸಮಸ್ಯೆಗಳ ಕುರಿತು ಸರ್ಕಾರ ಜೊತೆಯಲ್ಲಿ ಚರ್ಚಿಸಲಾಗುವುದು’ ಎಂದು ತಿಳಿಸಿದರು.
ಕೆಎಸ್ಆರ್ಟಿಸಿ ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ಅಧ್ಯಕ್ಷತೆವಹಿಸಿದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಪ್ರಭು ಸ್ವಾಮಿ, ಬಿಬಿಎಂಪಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಎಚ್.ಕೆ. ಸುರೇಶ್, ಪ್ರಧಾನ ಕಾರ್ಯದರ್ಶಿ ಎಂ. ಸತ್ಯನಾರಾಯಣ್, ಖಜಾಂಚಿ ರಮೇಶ್ ವಿ., ಕೆಎಸ್ಆರ್ಟಿಸಿ ಸಮಿತಿ ಅಧ್ಯಕ್ಷ ಹುಸೇನ್ ಕೆ.ಎಸ್.ಎಂ., ಪ್ರಧಾನ ಕಾರ್ಯದರ್ಶಿ ಆರ್.ಟಿ. ಶಾಂತರಾಜು, ಖಜಾಂಚಿ ಟಿ.ಎಸ್. ರಂಗೇಗೌಡ, ಎನ್ಡಬ್ಲ್ಯುಆರ್ಟಿಸಿ ಸಮಿತಿ ಅಧ್ಯಕ್ಷ ಗಂಗಾಧರ್ ಕಮಲದಿನ್ನಿ, ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಮಟ್ಟಿ, ಖಜಾಂಜಿ ಅಮೃತೇಶ್ ಹೊಸಹಳ್ಳಿ ಮತ್ತು ಕೆಕೆಆರ್ಟಿಸಿ ಸಮಿತಿಯ ಅಧ್ಯಕ್ಷರಾದ ರೆಹಮಾನ್ ಮಸ್ಕಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಹೊಸಮಠ, ಖಜಾಂಚಿ ರಘುನಾಥ್ ಜಾಯ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.