ADVERTISEMENT

ವಿವಿಧೆಡೆ ಗಾಂಜಾ ಮಾರಾಟ: ಬಂಧನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 20:05 IST
Last Updated 15 ಸೆಪ್ಟೆಂಬರ್ 2020, 20:05 IST
ಆರೋಪಿಗಳಾದ ಪುನೀತ್ ಹಾಗೂ ಆನಂದ್ ಕುಮಾರ್
ಆರೋಪಿಗಳಾದ ಪುನೀತ್ ಹಾಗೂ ಆನಂದ್ ಕುಮಾರ್   

ಬೆಂಗಳೂರು: ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಭಾರಿ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಕಾಮಾಕ್ಷಿಪಾಳ್ಯದ ಕಾವೇರಿಪುರ ಬಳಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ, ₹3.40 ಲಕ್ಷ ಮೌಲ್ಯದ 17 ಕೆ.ಜಿ ಗಾಂಜಾ ವಶಪಡಿಸಿಕೊಂಡರು.

ವಿದ್ಯಾಮಾನ್ಯ ನಗರದ ಪುನೀತ್ (30) ಹಾಗೂ ಆರೂಡಿ ಗ್ರಾಮದ ಆನಂದಕುಮಾರ್ (39) ಬಂಧಿತರು.

ADVERTISEMENT

'ಆಂಧ್ರಪ್ರದೇಶದ ವ್ಯಕ್ತಿಯೊಬ್ಬನಿಂದ ಆನಂದ್ ಗಾಂಜಾ ಪಡೆಯುತ್ತಿದ್ದ. ಆತನಿಗಾಗಿ ಹುಡುಕಾಟ ಆರಂಭಿಸಿದ್ದೇವೆ. ಬಂಧಿತರ ವಿರುದ್ಧ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಪೊಲೀಸರು ತಿಳಿಸಿದರು.

ಸಿ.ಟಿ.ಮಾರುಕಟ್ಟೆಯ ಎಸ್.ಕೆ.ಆರ್.ಕಾಂಪ್ಲೆಕ್ಸ್ ನ ಶೌಚಾಲಯದ ಬಳಿ ಗಾಂಜಾ ಇಟ್ಟುಕೊಂಡಿದ್ದ ಕೋಣನಕುಂಟೆ ಕ್ರಾಸ್ ನಿವಾಸಿ ಪುರುಷೋತ್ತಮ್ (38) ಎಂಬ ಆರೋಪಿಯನ್ನು ಸಿ.ಟಿ.ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದು, 450 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ವಿಶ್ವೇಶ್ವರಯ್ಯ ಬಡಾವಣೆಯ ಕಾಲೇಜಿನ ಬಳಿ ಗಾಂಜಾ ಮಾರುತ್ತಿದ್ದ ಇಬ್ಬರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಅಂಜನಾಪುರದ ಜಯಮಲ್ಲು (23), ಉತ್ತರಹಳ್ಳಿ ನಿವಾಸಿ ಎನ್.ಧನುಷ್ (21) ಬಂಧಿತರು. ಆರೋಪಿಗಳಿಂದ ₹25 ಸಾವಿರ ಮೌಲ್ಯದ 1.20 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಇಬ್ಬರ ವಿರುದ್ಧ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.