ADVERTISEMENT

ಗಾಂಧಿ ಬಜಾರ್‌ ರಸ್ತೆ ನವೀಕರಣಕ್ಕೆ ಪರ–ವಿರೋಧ

ಗಾಂಧಿ ಬಜಾರ್ ನವೀಕರಣ ವಿನ್ಯಾಸ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 31 ಮೇ 2022, 19:31 IST
Last Updated 31 ಮೇ 2022, 19:31 IST
ಶಾಸಕ ಉದಯ ಗರುಡಾಚಾರ್ ಅವರ ಬಳಿ ವರ್ತಕರು ಸಮಸ್ಯೆ ಹೇಳಿಕೊಂಡರು
ಶಾಸಕ ಉದಯ ಗರುಡಾಚಾರ್ ಅವರ ಬಳಿ ವರ್ತಕರು ಸಮಸ್ಯೆ ಹೇಳಿಕೊಂಡರು   

ಬೆಂಗಳೂರು: ಗಾಂಧಿ ಬಜಾರ್‌ ರಸ್ತೆ ನವೀಕರಣಕ್ಕೆ ನಗರ ಭೂ ಸಾರಿಗೆ ನಿರ್ದೇಶನಾಲಯ(ಡಲ್ಟ್‌) ಯೋಜನೆ ರೂಪಿಸಿದ್ದು, ಇದು ಇಲ್ಲಿನ ಅಂಗಡಿಗಳ ವರ್ತಕರ ವಿರೋಧಕ್ಕೆ ಕಾರಣವಾಗಿದೆ.

ಚರ್ಚ್‌ ಸ್ಟ್ರೀಟ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ವಾಹನ ಸಂಚಾರ ನಿರ್ಬಂಧಿಸಲು ಯೋಜನೆ ರೂಪಿಸಲಾ ಗಿತ್ತು. ಅದಕ್ಕೆ ವಿರೋಧ ವ್ಯಕ್ತವಾದ ಬಳಿಕ ಈಗ ವಾಹನ ಸಂಚಾರಕ್ಕೆ ಅವ ಕಾಶ ಕಲ್ಪಿಸಲು ಉದ್ದೇಶಿಸಿದೆ. ಆದರೆ, ರಸ್ತೆಯನ್ನು ಕಿರಿದುಗೊಳಿಸಿ ವಿಶಾಲವಾದ ಪಾದಚಾರಿ ಮಾರ್ಗ ನಿರ್ಮಿಸಲು ಯೋಜಿಸಲಾಗಿದೆ. ಆಂಬುಲೆನ್ಸ್, ಅಗ್ನಿ ಶಾಮಕ ಮತ್ತು ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲು ಉದ್ದೇಶಿಸಿದೆ. ಬೀದಿಬದಿ ವ್ಯಾಪಾರಕ್ಕೆ ಶೆಲ್ಟರ್‌ಗಳನ್ನು ನಿರ್ಮಿಸಿಕೊಡುವ ಪ್ರಸ್ತಾಪವನ್ನೂ ಯೋಜನೆ ಒಳಗೊಂಡಿದೆ.

ಯೋಜನೆಯ ಸಂಪೂರ್ಣ ವಿವರ ವನ್ನು ಟಾಗೋರ್ ಪಾರ್ಕ್‌ ಸಭಾ ಮಂಟ ಪದಲ್ಲಿ ಮಂಗಳವಾರ ಪ್ರದರ್ಶಿಸಲಾಯಿತು. ಬೀದಿ ಬದಿ ವ್ಯಾಪಾರಕ್ಕೆ ತಲಾ 4/6 ಅಡಿ ಜಾಗ ನೀಡಿದರೆ ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನ ಜಾಗ ನೀಡಬೇಕು ಮತ್ತು ಎಲ್ಲಾ ಬೀದಿಬದಿ ವ್ಯಾಪಾರಿಗಳಿಗೂ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು ಎಂದು ವ್ಯಾಪಾರಿಗಳು ಮನವಿ ಮಾಡಿದರು.

ADVERTISEMENT

‘ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ನಮ್ಮ ಈ ಬೇಡಿಕೆಗಳಿಗೆ ಸಮ್ಮತಿ ಸಿದರೆ ನಮ್ಮ ವಿರೋಧ ಇಲ್ಲ’ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷೆ ವನಜಾ ಸ್ಪಷ್ಟಪಡಿಸಿದರು.

ಆದರೆ, ಅಗಲವಾಗಿರುವ ರಸ್ತೆ ಯನ್ನು ಕಿರಿದು ಮಾಡುವ ಪ್ರಸ್ತಾಪಕ್ಕೆ ಗಾಂಧಿ ಬಜಾರ್ ಅಂಗಡಿಗಳ ವರ್ತಕರು ವಿರೋಧ ವ್ಯಕ್ತಪಡಿಸಿದರು. ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಕಿರಿದು ಮಾಡಿದರೆ ಇನ್ನಷ್ಟು ಸಮಸ್ಯೆಯಾಗಲಿದೆ ಎಂದರು.

‘ವಾಹನಗಳನ್ನು ಬೇರೆಡೆ ನಿಲ್ಲಿಸಿ ನಡೆದುಕೊಂಡು ಬರಲು ಜನ ಒಪ್ಪುವುದಿಲ್ಲ. ಆಗ ಈ ರಸ್ತೆಯಲ್ಲಿನ ಅಂಗಡಿ ಮುಂಗಟ್ಟುಗಳಿಗೆ ಗ್ರಾಹಕರು ಇಲ್ಲವಾಗುತ್ತಾರೆ. ಕಚೇರಿ ಮತ್ತು ಮನೆಗಳಿಗೆ ಹೋಗುವವರಿಗೂ ತೊಂದರೆ ಆಗಲಿದೆ’ ಎಂದು ಗಾಂಧಿ ಬಜಾರ್ ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್ ಹೇಳಿದರು.

ಸ್ಥಳಕ್ಕೆ ಬಂದ ಶಾಸಕ ಉದಯ ಗರುಡಾಚಾರ್, ‘ವಾಹನಗಳ ಸಂಚಾರ ನಿರ್ಬಂಧಿಸಿದರೆ ತೊಂದರೆ ಆಗಲಿದೆ. ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.