ADVERTISEMENT

ಗಣೇಶ ಮೂರ್ತಿ ಪ್ರತಿಷ್ಠಾಪನೆ: 63 ಕಡೆ ಏಕಗವಾಕ್ಷಿ ಕೇಂದ್ರ

ಬಿಬಿಎಂಪಿ ಮುಖ್ಯ ಆಯುಕ್ತ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 21:24 IST
Last Updated 20 ಆಗಸ್ಟ್ 2022, 21:24 IST
ತುಷಾರ್ ಗಿರಿನಾಥ್
ತುಷಾರ್ ಗಿರಿನಾಥ್   

ಬೆಂಗಳೂರು: ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಪಾಲಿಕೆಯ 63 ಉಪ ವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆ ಯಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಲ್ಲಾ ವಲಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗಣೇಶ ಹಬ್ಬವನ್ನು ಪರಿಸರಸ್ನೇಹಿಯಾಗಿ ಆಚರಿಸುವ ಸಂಬಂಧ ಪಾಲಿಕೆ ವತಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವಿಧ ಇಲಾಖೆ ಅಧಿಕಾರಿಗಳ ಜತೆ ಸಮನ್ವಯ ಸಭೆ ನಡೆಸಿದ ಅವರು, ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲು ತಿಳಿಸಿದರು.

ಪ್ರತಿ ವರ್ಷದಂತೆ ಸ್ಯಾಂಕಿ, ಹಲಸೂರು, ಯಡಿಯೂರು, ಹೆಬ್ಬಾಳ ಸೇರಿ ಪ್ರಮುಖ ಕೆರೆ ಮತ್ತು ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಹೇಳಿದರು.

ADVERTISEMENT

ಕೆಲ ಪ್ರದೇಶಗಳಲ್ಲಿ ಕೆರೆಗಳು ವಸತಿ ಪ್ರದೇಶದಿಂದ ದೂರ ಇರುವುದರಿಂದ ಸಾರ್ವಜನಿಕರು ಚಿಕ್ಕ ಮೂರ್ತಿಗಳನ್ನು ವಿಸರ್ಜನೆ ಮಾಡಲು ಪ್ರತಿ ವಲಯಗಳ ಪ್ರಮುಖ ಸ್ಥಳ, ಜಂಕ್ಷನ್ ಮತ್ತು ಅವಶ್ಯ ಇರುವೆಡೆ ವಾರ್ಡ್‌ವಾರು ಸಂಚಾರಿ ವಿಸರ್ಜನಾ ಘಟಕಗಳನ್ನು(ತಾತ್ಕಾಲಿಕ ಟ್ಯಾಂಕ್‌) ಸ್ಥಾಪಿಸಲು ಸೂಚಿಸಿದರು.

ಗಣೇಶ ಮೂರ್ತಿಗಳ ವಿಸರ್ಜನೆಗೆ ಗುರುತಿಸಿರುವ ಕೆರೆಗಳ ಸುತ್ತಮುತ್ತ ಹಾಗೂ ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾದ ಬ್ಯಾರಿಕೇಡ್‌ ಅಳವಡಿಸಬೇಕು. ಪ್ರತಿ ವಿಸರ್ಜನಾ ಕೇಂದ್ರದಲ್ಲೂ ನುರಿತ 10 ಈಜುಗಾರರು ಮತ್ತು ಅಗತ್ಯ ಸಿಬ್ಬಂದಿ ನೇಮಿಸಬೇಕು. ಧ್ವನಿವರ್ಧಕ ಅಳವಡಿಸಿ ಜಾಗೃತಿ ಮೂಡಿಸಬೇಕು. ಕೆರೆಗಳ ಬಳಿ ವಿದ್ಯುತ್ ದ್ವೀಪಗಳ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ವಿಸರ್ಜನಾ ಕೇಂದ್ರಗಳಲ್ಲಿ ಸಂಗ್ರಹ ವಾಗುವ ತ್ಯಾಜ್ಯಗಳನ್ನು ಕಂಟೈನರ್‌ಗಳ ಮೂಲಕ ತೆರವುಗೊಳಿಸಬೇಕು. ಸ್ವಚ್ಛತಾ ಸಿಬ್ಬಂದಿ ಹಾಗೂ ಸಾಗಣೆ ವಾಹನ ಸದಾ ಸಜ್ಜಾಗಿರಬೇಕು. ವಿಸರ್ಜನೆಗೆ ಅನುಕೂಲ ವಾಗುವಂತೆ ಅಗತ್ಯವಿದ್ದಲ್ಲಿ ದೋಣಿಗಳು, ನೀರೆತ್ತುವ ಪಂಪ್‌ಗಳು, ಕ್ರೇನ್‌ಗಳ ವ್ಯವಸ್ಥೆ ಕೂಡ ಸಿದ್ಧ ಇರಬೇಕು ಎಂದು ಸೂಚಿಸಿದರು.

‘ಪರಿಸರಸ್ನೇಹಿ ಮೂರ್ತಿ ಪೂಜಿಸಿ’
‘ಬಣ್ಣದ ಮತ್ತು ಪಿಒಪಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಬದಲಿಗೆ ಪರಸರ ಸ್ನೇಹಿ ಮೂರ್ತಿಗಳನ್ನು ಪೂಜಿಸಬೇಕು’ ಎಂದು ತುಷಾರ್ ಗಿರಿನಾಥ್ಸಾರ್ವಜನಿಕರಲ್ಲಿ ಮನವಿ ಮಾಡಿದರು.

ವಿಸರ್ಜನಾ ಮೆರವಣಿಗೆ ವೇಳೆ ಪಟಾಕಿ, ಸಿಡಿ ಮದ್ದು ಸಿಡಿಸದಂತೆ ನೋಡಿಕೊಳ್ಳಬೇಕು. ‌ನಿಗದಿತ ಸ್ಥಳಗಳಲ್ಲೇ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು. ಫ್ಲೆಕ್ಸ್, ಬ್ಯಾನರ್ ಅಳವಡಿಕೆ ಮತ್ತು ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪಿಒಪಿ ಮೂರ್ತಿ ತಯಾರಿಕೆ ವಿರುದ್ಧ ಕ್ರಮ: ‘ರಾಸಾಯನಿಕ ಬಣ್ಣಗಳು, ಥರ್ಮಾಕೊಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಗಣೇಶ ಮೂರ್ತಿ ತಯಾರಿಕೆ ಸಂಪೂರ್ಣ ನಿಷೇಧಿಸಲಾಗಿದೆ. ಈ ರೀತಿಯ ವಸ್ತುಗಳನ್ನು ತಯಾರು ಮಾಡುವ ಸ್ಥಳಗಳಿದ್ದರೆ ಗುರುತಿಸಿ ಕ್ರಮ ಜರುಗಿಸಬೇಕು. ವಲಯ ಜಂಟಿ ಆಯುಕ್ತರು, ಆರೋಗ್ಯ ವೈದ್ಯಾಧಿಕಾರಿಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು, ವಾರ್ಡ್‌ವಾರು ಪಟ್ಟಿ ಸಿದ್ಧಪಡಿಸಿ ಸ್ಥಳ ತನಿಖೆ ಕೈಗೊಳ್ಳಬೇಕು. ತಯಾರಿಕೆ, ಮಾರಾಟ ಮಾಡುತ್ತಿದ್ದರೆ ದಂಡ ವಿಧಿಸುವ ಜತೆಗೆ ಪ್ರಕರಣ ದಾಖಲಿಸಬೇಕು ಎಂದು ತುಷಾರ್‌ ತಿಳಿಸಿದರು.

ಪಿಒಪಿ ಮೂರ್ತಿ ತಯಾರಿಕೆ ವಿರುದ್ಧ ಕ್ರಮ
‘ರಾಸಾಯನಿಕ ಬಣ್ಣಗಳು, ಥರ್ಮಾಕೊಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಗಣೇಶ ಮೂರ್ತಿ ತಯಾರಿಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ರೀತಿಯ ವಸ್ತುಗಳನ್ನು ತಯಾರು ಮಾಡುವ ಸ್ಥಳಗಳಿದ್ದರೆ ಗುರುತಿಸಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ಸೂಚನೆ ನೀಡಿದರು.

ವಲಯ ಜಂಟಿ ಆಯುಕ್ತರು, ಆರೋಗ್ಯ ವೈದ್ಯಾಧಿಕಾರಿಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು, ವಾರ್ಡ್‌ವಾರು ಪಟ್ಟಿ ಸಿದ್ಧಪಡಿಸಿ ಸ್ಥಳ ತನಿಖೆ ಕೈಗೊಳ್ಳಬೇಕು. ತಯಾರಿಕೆ ಅಥವಾ ಮಾರಾಟ ಮಾಡುತ್ತಿದ್ದರೆ ದಂಡ ವಿಧಿಸುವ ಜತೆಗೆ ಪ್ರಕರಣ ದಾಖಲಿಸಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.