ADVERTISEMENT

ಬೆಂಗಳೂರು | ಕುಂದು ಕೊರತೆ-ಜನದನಿ: ಕಸ ವಿಲೇವಾರಿ ಮಾಡಲು ಮನವಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 0:05 IST
Last Updated 14 ಜುಲೈ 2025, 0:05 IST
ಖಾಲಿ ನಿವೇಶನದಲ್ಲಿ ಕಸ ಹಾಕಿರುವುದು
ಖಾಲಿ ನಿವೇಶನದಲ್ಲಿ ಕಸ ಹಾಕಿರುವುದು   

‘ಕಸ ವಿಲೇವಾರಿ ಮಾಡಿ’ 

ದೊಡ್ಡಕನ್ನಲ್ಲಿಯ ಗೇರ್ ಇಂಟರ್‌ನ್ಯಾಷನಲ್ ಶಾಲೆ ಬಳಿ ಇರುವ ಮುಖ್ಯರಸ್ತೆಯ ಪಕ್ಕದಲ್ಲಿರುವ ಖಾಲಿ ನಿವೇಶನವು ಕಸದಿಂದ ತುಂಬಿದೆ. ಹಲವು ದಿನಗಳಿಂದ ಇರುವ ಈ ಕಸದ ರಾಶಿಯನ್ನು ತೆರವು ಮಾಡುತ್ತಿಲ್ಲ. ಮಳೆಯ ಕಾರಣ ಕಸ ಕೊಳೆತು, ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಆದ್ದರಿಂದ ಇಲ್ಲಿ ಕಸ ಹಾಕದಂತೆ ತಡೆಯಲು ಹಾಗೂ ಈಗ ಇರುವ ಕಸವನ್ನು ತುರ್ತಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. 

-ಅನುದೀಪ್, ಸ್ಥಳೀಯ ನಿವಾಸಿ

ADVERTISEMENT

****

‘ರಸ್ತೆ ಮಧ್ಯದಲ್ಲಿ ಗುಂಡಿ’

ನಗರದ ರಾಜಾರಾಮ್‌ ಮೋಹನ್‌ರಾಯ್‌ ಮುಖ್ಯರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ರಸ್ತೆ ಹಾಳಾಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಹಾಳಾಗಿರುವುದರಿಂದ ಸಂಚಾರ ದಟ್ಟಣೆ, ಅಪಘಾತಗಳು ಸಂಭವಿಸುತ್ತಿವೆ. ಒಳಚರಂಡಿ ಮೇಲಿನ ಮುಚ್ಚಳ ತೆರೆದುಕೊಂಡಿದೆ. ಏನಾದರೂ ಅನಾಹುತಗಳು ಸಂಭವಿಸುವ ಮುನ್ನ ಇದನ್ನು ಸರಿಪಡಿಸಬೇಕು. ಸಂಚಾರ ವಿಭಾಗದ ಪೊಲೀಸರು ಇಲ್ಲಿ ಬ್ಯಾರಿಕೇಡ್‌ ಹಾಕಿದ್ದಾರೆ.

-ಶಿವಪ್ರಸಾದ್, ವಾಹನ ಸವಾರ 

****

ಒಳಚರಂಡಿಯ ಮುಚ್ಚಳ ತೆರೆದ ಸ್ಥಿತಿಯಲ್ಲಿರುವುದು

‘ರಾಜಕಾಲುವೆ: ಹೂಳು ತೆರವುಗೊಳಿಸಿ’

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕಮ್ಮನಹಳ್ಳಿ ವಾರ್ಡ್‌ ಸಂಖ್ಯೆ 28ರ ರಾಮಸ್ವಾಮಿ ಪಾಳ್ಯದ ಜೋಡಿ ಉದ್ಯಾನ ಹಾಗೂ ಡಾ. ರಾಜ್‌ಕುಮಾರ್‌ ಆಟದ ಮೈದಾನ ಪಕ್ಕದಲ್ಲಿರುವ ರಾಜಕಾಲುವೆಯಲ್ಲಿ ಹೂಳು ತುಂಬಿಕೊಂಡಿದೆ. ತ್ಯಾಜ್ಯ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಾಜಕಾಲುವೆ ಸ್ವಚ್ಛತೆಗೆ ಆದ್ಯತೆ ನೀಡಬೇಕು.  

-ಬಿ. ಗೋಪಾಲ್ ರೆಡ್ಡಿ, ಎಂ.ಎಸ್. ನಗರ

****

ರಾಜಕಾಲುವೆಯಲ್ಲಿ ಹೂಳು ತುಂಬಿಕೊಂಡಿದೆ 

‘ಪೀಣ್ಯ: ಅಗೆದ ರಸ್ತೆ ಸರಿಪಡಿಸಿ’

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಟಿವಿಎಸ್‌ ಕ್ರಾಸ್‌ನಿಂದ ಪೀಣ್ಯ ಪೊಲೀಸ್‌ ಠಾಣೆಯ ರಸ್ತೆಯವರೆಗಿನ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಈ ಮಾರ್ಗದ ಮೂಲಕ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಹಾಳಾಗಿರುವ ಪರಿಣಾಮ ಸಂಚಾರ ದಟ್ಟಣೆ ಆಗುತ್ತಿದೆ. ಅಗೆದಿರುವ ಈ ರಸ್ತೆಗೆ ಎರಡು ವರ್ಷಗಳಿಂದ ಡಾಂಬರ್‌ ಹಾಕಿಲ್ಲ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. 

-ಚಿನ್ಮಯ್, ಪೀಣ್ಯ

****

ಪೀಣ್ಯ ಕೈಗಾರಿಕೆ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಗೆದಿರುವುದು 

‘ಸ್ಕೈವಾಕ್‌ಗೆ ಹಾಕಿರುವ ಫ್ಲೆಕ್ಸ್‌ ತೆಗೆಯಿರಿ’

‘ಹೆಬ್ಬಾಳದ ಎಸ್ಟೀಮ್‌ ಮಾಲ್ ಹತ್ತಿರದ ಸ್ಕೈವಾಕ್‌ನ ಎರಡೂ ಬದಿಯಲ್ಲಿ ಫ್ಲೆಕ್ಸ್‌ ಹಾಕಲಾಗಿದೆ. ಸ್ಕೈವಾಕ್‌ ಗುಹೆಯಾಗಿ ಮಾರ್ಪಟ್ಟಿದ್ದು, ಇಲ್ಲಿಂದ ಹೋಗುವವರು ಬೇರೆಯವರೆಗೆ ಕಾಣುವುದಿಲ್ಲ. ಹಾಗಾಗಿ ಇದು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಈ ಸ್ಕೈವಾಕ್‌ ಬಳಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಹಾಕಿರುವ ಫ್ಲೆಕ್ಸ್‌ ತೆರವುಗೊಳಿಸಬೇಕು. 

-ಪತ್ತಂಗಿ ಎಸ್. ಮುರಳಿ, ಕುಮಾರಸ್ವಾಮಿ ಬಡಾವಣೆ

****

ಸ್ಕೈವಾಕ್‌ನ ಎರಡು ಬದಿಯಲ್ಲಿ ಫ್ಲೆಕ್ಸ್‌ಗಳನ್ನು ಹಾಕಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.