ADVERTISEMENT

GBA - 5 ನಗರ ಪಾಲಿಕೆ | ನವೆಂಬರ್ 1ಕ್ಕೆ ವಾರ್ಡ್‌ ಅಂತಿಮ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 19:17 IST
Last Updated 29 ಜುಲೈ 2025, 19:17 IST
<div class="paragraphs"><p>ಡಿ.ಕೆ ಶಿವಕುಮಾರ್‌</p></div>

ಡಿ.ಕೆ ಶಿವಕುಮಾರ್‌

   

ಫೇಸ್‌ಬುಕ್‌ ಚಿತ್ರ

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರದೇಶದಲ್ಲಿ (ಜಿಬಿಎ) ರಚಿಸಲಾಗಿರುವ ಐದು ಹೊಸ ನಗರ ಪಾಲಿಕೆಗಳ ವಾರ್ಡ್‌ಗಳನ್ನು ಅಂತಿಮಗೊಳಿಸಿ, ನವೆಂಬರ್‌ 1ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ADVERTISEMENT

ಬಿಬಿಎಂಪಿ, ಬಿಡಿಎ, ಜಲಮಂಡಳಿ ಅಧಿಕಾರಿಗಳೊಂದಿಗೆ ಮಂಗಳವಾರ ದಿನಪೂರ್ತಿ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.

ಜಿಬಿಎಯಲ್ಲಿ ಐದು ನಗರ ಪಾಲಿಕೆಗಳನ್ನು ರಚಿಸಿ, ಕರಡು ಅಧಿಸೂಚನೆ ಹೊರಡಿಸಲಾಗಿದೆ. ಆಗಸ್ಟ್‌ 18ರವರೆಗೆ ರಾಜಕೀಯ ಪಕ್ಷಗಳೂ ಸೇರಿದಂತೆ ನಾಗರಿಕರು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಎಲ್ಲವನ್ನೂ ವಿಲೇವಾರಿ ಮಾಡಿ, ಸೆಪ್ಟೆಂಬರ್‌ 2ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ತಿಳಿಸಿದರು.

ವಾರ್ಡ್‌ಗಳ ಮರುವಿಂಗಡಣೆಗೆ ಆಯೋಗವನ್ನು ರಚಿಸಲಾಗುತ್ತಿದ್ದು, ಆಗಸ್ಟ್‌ 3ರಿಂದ ವಾರ್ಡ್‌ ಮರುವಿಂಗಡಣೆ ಪ್ರಕ್ರಿಯೆ ಆರಂಭವಾಗಲಿದೆ. ಸೆಪ್ಟೆಂಬರ್‌ನಲ್ಲಿ ಕರಡು ಅಧಿಸೂಚನೆ ಪ್ರಕಟಿಸಿ, ನವೆಂಬರ್‌ 1ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ಅದಾದ ನಂತರ ವಾರ್ಡ್‌ಗಳಿಗೆ ಮೀಸಲಾತಿ ನಿಗದಿ ಮಾಡಿ ಆದಷ್ಟು ಬೇಗ ಚುನಾವಣೆ ನಡೆಸಲಾಗುತ್ತದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಲಾಗುತ್ತದೆ ಎಂದು ವಿವರ ನೀಡಿದರು.

ಸ್ವಚ್ಛ ಬೆಂಗಳೂರು: ನಗರದ ರಸ್ತೆ ಹಾಗೂ ಖಾಲಿ ಸ್ಥಳಗಳಲ್ಲಿ ಕಸ ಸುರಿದಿರುವುದು ಕಂಡು ಬಂದರೆ ಬಿಬಿಎಂಪಿಗೆ ವಾಟ್ಸ್‌ಆ್ಯಪ್‌ ಹಾಗೂ ಇ–ಮೇಲ್‌ನಲ್ಲಿ ದೂರು ನೀಡಲು ನಾಗರಿಕರಿಗೆ ತಿಳಿಸಲಾಗಿತ್ತು. 10,394  ದೂರುಗಳು ಬಂದಿದ್ದು, ಅದರಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ದೂರುಗಳಿಗೆ ಪರಿಹಾರ ನೀಡಲಾಗಿದೆ. ಸ್ವಚ್ಛತೆ ಇನ್ನೂ ಸಾಲದ್ದಾಗಿದ್ದು, ಹೆಚ್ಚಿನ ರೀತಿಯಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

6.5 ಲಕ್ಷ ಇ– ಖಾತಾ: ಬಿಬಿಎಂಪಿ ವ್ಯಾಪ್ತಿಯಲ್ಲಿರುವ 24 ಲಕ್ಷ ಆಸ್ತಿಗಳಲ್ಲಿ 6.5 ಲಕ್ಷ ಮಾಲೀಕರು ಇ–ಖಾತಾ ಪಡೆದುಕೊಂಡಿದ್ದಾರೆ. ಎಲ್ಲರೂ ಇ–ಖಾತಾ ಪಡೆದುಕೊಳ್ಳಲು ಅಕ್ಟೋಬರ್‌ 22ರಿಂದ ಬೃಹತ್‌ ಇ–ಖಾತಾ ಜಾಗೃತಿ ಅಭಿಯಾನ ನಡೆಸಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಎಲ್ಲ ಆಸ್ತಿಗಳಿಗೆ ಎ ಖಾತಾ ನೀಡಲು ಪ್ರಮಾಣಿತ ಕಾರ್ಯಾಚಾರಣಾ ವಿಧಾನಗಳು (ಎಸ್‌ಒಪಿ) ರಚನೆಯಾಗಲಿವೆ. ಎಲ್ಲ ಪ್ರಕ್ರಿಯೆಗಳು ಆನ್‌ಲೈನ್‌ನಲ್ಲಿ ಆಗಸ್ಟ್‌ 15ರಿಂದ ಆರಂಭವಾಗಲಿವೆ ಎಂದು ಹೇಳಿದರು.

ಆಗಸ್ಟ್‌ 3ರಿಂದ ವಾರ್ಡ್‌ ಮರುವಿಂಗಣೆ ಕಾರ್ಯ ಆರಂಭ ಸೆಪ್ಟೆಂಬರ್‌ 2ಕ್ಕೆ ಐದು ನಗರ ಪಾಲಿಕೆಗಳ ಗಡಿಯ ಅಂತಿಮ ಅಧಿಸೂಚನೆ ಆಗಸ್ಟ್‌ 15ರಿಂದ ಆನ್‌ಲೈನ್‌ನಲ್ಲಿ ಎಲ್ಲರಿಗೂ ಎ ಖಾತಾ

ಹೆಬ್ಬಾಳ ಜಂಕ್ಷನ್‌: ಆ.15ರೊಳಗೆ ಉದ್ಘಾಟನೆ

ಕೆ.ಆರ್.ಪುರ ಕಡೆಯಿಂದ ನಗರದ ಕಡೆಗೆ ಬರುವ ಹೆಬ್ಬಾಳ ಜಂಕ್ಷನ್‌ನ ಪಥವನ್ನು ಆಗಸ್ಟ್‌ 15ರೊಳಗೆ ಉದ್ಘಾಟಿಸಲಾಗುತ್ತದೆ. ಇದರ ಜೊತೆಗೆ ಶಿವಾನಂದ ಸರ್ಕಲ್ ಜಂಕ್ಷನ್ ಅಭಿವೃದ್ಧಿ ಹಾಗೂ ಗಾಂಧಿ ಬಜಾರ್ ಬಳಿಯ ಬಹುಮಹಡಿ ಪಾರ್ಕಿಂಗ್ ಕಟ್ಟಡವನ್ನು ಬಳಸಲು ಅನುವು ಮಾಡಿಕೊಡಲಾಗುತ್ತದೆ. ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಉದ್ಘಾಟನಾ ದಿನಾಂಕ ನಿಗದಿ ಪಡಿಸಲಾಗುತ್ತದೆ. ಆಗಸ್ಟ್‌ 6 ಅಥವಾ 15ರೊಳಗೆ ಈ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

‘ರಮ್ಯಾಗೆ ನಮ್ಮ ಬೆಂಬಲ’

‘ನಟಿ ರಮ್ಯಾ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವರಾಜ್‌ಕುಮಾರ್‌ ಮಹಿಳಾ ಕಾಂಗ್ರೆಸ್‌ನವರು ಬೆಂಬಲ ನೀಡುತ್ತಿರುವ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ‘ನಮ್ಮ ಪಕ್ಷದವರು ಯಾರಿಗೆ ಬೆಂಬಲ ಕೊಡುತ್ತಾರೋ ಅವರಿಗೆ ನಾವು ಬೆಂಬಲ ಕೊಡುತ್ತೇವೆ’ ಎಂದರು. ‘ರಾಹುಲ್ ಗಾಂಧಿಯವರು ಆಗಸ್ಟ್‌ ಮೊದಲ ವಾರದಲ್ಲಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂಬ ಬಗ್ಗೆ ಚರ್ಚೆ ಇದೆ. ಈ ಬಗ್ಗೆ ಮುಖ್ಯಮಂತ್ರಿಯವರ ಬಳಿ ಚರ್ಚಿಸಿ ಮಾಹಿತಿ ನೀಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.