ಬೆಂಗಳೂರು: ಆಟೊ ಬಾಡಿಗೆ ಪಡೆದಿದ್ದ ಮೂವರು ಯುವತಿಯರು, ಚಾಲಕನ ಜೊತೆ ಜಗಳ ತೆಗೆದು ಕಪಾಳಕ್ಕೆ ಹೊಡೆದು ಪರಾರಿಯಾಗಿದ್ದಾರೆ.
ಆ ಸಂಬಂಧ ಹೈಗ್ರೌಂಡ್ಸ್ ಠಾಣೆಗೆ ಆಟೊ ಚಾಲಕ ಸುರೇಂದ್ರ ಬಾಬು ದೂರು ನೀಡಿದ್ದಾರೆ. ಯುವತಿಯರ ವಿರುದ್ಧ ಎನ್ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.
‘ನಾಗದೇವನಹಳ್ಳಿ ನಿವಾಸಿಯಾದ ನಾನು ಮೇ 29ರಂದು ರಾತ್ರಿ 8.30ರ ಸುಮಾರಿಗೆ ಎಂ.ಜಿ. ರಸ್ತೆಯಲ್ಲಿ ಆಟೊ ಸಮೇತ ನಿಂತಿದ್ದೆ.ವಿಜಯನಗರದ ಹೊಸಹಳ್ಳಿ ಬಳಿ ಬಿಡುವಂತೆ ಮೂವರು ಯುವತಿಯರು ಆಟೊ ಬಾಡಿಗೆ ಪಡೆದಿದ್ದರು’ ಎಂದು ಸುರೇಂದ್ರ ದೂರಿನಲ್ಲಿ ಹೇಳಿದ್ದಾರೆ.
‘ಮದ್ಯದ ಅಮಲಿನಲ್ಲಿದ್ದ ಯುವತಿಯರು ಮಾರ್ಗ ಮಧ್ಯೆ ಕಿರುಚಾಡಲು ಆರಂಭಿಸಿದ್ದರು. ಅದನ್ನು ಪ್ರಶ್ನಿಸಿದಾಗ ಸುಮ್ಮನಿರುವಂತೆ ನನ್ನನ್ನು ಬೆದರಿಸಿದರು. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದಿದ್ದಾರೆ. ಆಟೊ ನಿಲ್ಲಿಸುತ್ತಿದ್ದಂತೆ ಮೂವರೂ ಇಳಿದು ಸ್ಥಳದಿಂದ ಹೊರಟು ಹೋಗಿದ್ದಾರೆ. ಯುವತಿಯರು ಬಗ್ಗೆ ಗೊತ್ತಿಲ್ಲ’ ಎಂದೂ ದೂರಿನಲ್ಲಿದೆ.
‘ಯುವತಿಯರಿರುವ ಫೋಟೊವನ್ನು ದೂರಿನ ಜೊತೆ ಸುರೇಂದ್ರ ಕೊಟ್ಟಿದ್ದಾರೆ. ಎನ್ಸಿಆರ್ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.