ಬೆಂಗಳೂರು: ಕೋವಿಡ್ನಿಂದ ಬಳಲುತ್ತಿರುವವರಿಗೆ ತಕ್ಷಣ ಹಾಸಿಗೆಗಳು ಸಿಗದೇ ಇರುವ ದೂರುಗಳು ಬರುತ್ತಿದ್ದು, ಹಾಸಿಗೆ ಲಭ್ಯ ಕೊರತೆ ನೀಗಿಸಲು ಬಿಬಿಎಂಪಿ ನಾನಾ ಮಾರ್ಗೋಪಾಯಗಳನ್ನು ಹುಡುಕುತ್ತಿದೆ. ಹೆಚ್ಚುವರಿ ಹಾಸಿಗೆಗಳ ಹುಡುಕುವ ಬದಲು ಇರುವ ಹಾಸಿಗೆಗಳು ತೀರಾ ಅಗತ್ಯ ಇರುವ ರೋಗಿಗಳ ಚಿಕಿತ್ಸೆಗೆ ಲಭ್ಯವಾಗುವಂತೆ ಮಾಡಲು ಮುಂದಾಗಿದೆ.
ಕೋವಿಡ್ ರೋಗಿಯು ಸರ್ಕಾರದ ಶಿಫಾರಸಿನ ಮೇರೆಗೆ ಆಸ್ಪತ್ರೆಗೆ ದಾಖಲಾದರೆ ಕನಿಷ್ಠ 10 ದಿನ ಚಿಕಿತ್ಸೆ ಪಡೆಯುವುದು ಕಡ್ಡಾಯ ಎಂಬ ನಿಯಮವಿದ್ದು, ಇದನ್ನು ಮಾರ್ಪಾಡು ಮಾಡಬೇಕು. ಬೇಗ ಗುಣಮುಖರಾದವರು ಏಳು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರವನ್ನು ಬಿಬಿಎಂಪಿ ಕೋರಿದೆ.
‘ಕೋವಿಡ್ನ ಲಘು ಲಕ್ಷಣ ಹೊಂದಿರುವ ಅನೇಕರು, ಭವಿಷ್ಯದಲ್ಲಿ ಅಪಾಯ ಆಗುವುದು ಬೇಡ ಎಂಬ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಂತಹವರು ದಾಖಲಾದ ಒಂದೆರಡು ದಿನಗಳಲ್ಲೇ ಗುಣಮುಖರಾಗುತ್ತಿದ್ದಾರೆ. ಅವರು ಮನೆಗೆ ಮರಳಲು ಬಯಸಿದರೂ ಚಾಲ್ತಿಯಲ್ಲಿರುವ ನಿಯಮ ಅದಕ್ಕೆ ಅವಕಾಶ ಕಲ್ಪಿಸುತ್ತಿಲ್ಲ. ಹಾಗಾಗಿ ಬೇಗನೇ ಗುಣಮುಖರಾದವರು ಏಳು ದಿನಗಳ ಒಳಗೆ ಬಿಡುಗಡೆ ಆಗುವುದಕ್ಕೆ ಅವಕಾಶ ಕಲ್ಪಿಸುವಂತೆ ನಿಯಮ ತಿದ್ದುಪಡಿ ಮಾಡಬೇಕು ಎಂದು ಸರ್ಕಾರವನ್ನು ಕೋರಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಭಾರಿ ಪ್ರಮಾಣದಲ್ಲೇನಿಲ್ಲ. ಹಾಗಿದ್ದರೂ, ರೋಗಿಗಳ ಸಂಖ್ಯೆ ಹೆಚ್ಚಳವಾದರೆ, ಅವರ ತುರ್ತು ಚಿಕಿತ್ಸೆಗೆ ಸಾಕಷ್ಟು ಹಾಸಿಗೆಗಳು ಲಭ್ಯ ಇರುವಂತೆ ನೋಡಿಕೊಳ್ಳಬೇಕು. ಒಮ್ಮೆ ಚಿಕಿತ್ಸೆಗೆ ದಾಖಲಾದವರು ಕಡ್ಡಾಯವಾಗಿ 10 ದಿನ ಆಸ್ಪತ್ರೆಯಲ್ಲೇ ಇರಬೇಕು ಎಂಬ ನಿಯಮದಲ್ಲಿ ಮಾರ್ಪಾಡು ಮಾಡಿದರೆ ನಗರದ ಆಸ್ಪತ್ರೆಗಳಲ್ಲಿ ಶೇ 20ರಷ್ಟು ಹಾಸಿಗೆಗಳು ಹೆಚ್ಚುವರಿಯಾಗಿ ಲಭ್ಯವಾಗಬಹುದು ಎಂಬ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.