ಸಪ್ನ ಪುಸ್ತಕ ಮಳಿಗೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಿರೀಶ್ ಕಾಸರವಳ್ಳಿ ಮಾತನಾಡಿದರು. ಡುಂಡಿರಾಜ್, ಜೋಗಿ, ಡಿ.ವಿ.ಗುರುಪ್ರಸಾದ್, ಎಂ.ಕೆ.ಮಂಜುನಾಥ ಮತ್ತು ಜಯಪ್ರಕಾಶ್ ನಾಗತಿಹಳ್ಳಿ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಬಾನು ಮುಷ್ತಾಕ್, ದೀಪಾ ಭಾಸ್ತಿ ಅವರಿಂದಾಗಿ ಕನ್ನಡ ಸಾಹಿತ್ಯ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕನ್ನಡದ ಮೇರು ಕೃತಿಗಳು ವಿಶ್ವಮಟ್ಟದಲ್ಲಿ ಪರಿಚಯವಾಗಬೇಕಾದರೆ ಇಂಗ್ಲಿಷ್ ಭಾಷಾಂತರ ಅಗತ್ಯ’ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
ಸಪ್ನ ಬುಕ್ ಹೌಸ್ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 15 ಪುಸ್ತಕಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಶಿವರಾಮ ಕಾರಂತರ ಚೋಮನದುಡಿ ಸೇರಿದಂತೆ ಕನ್ನಡದ ಹಲವು ಮಹತ್ವದ ಕೃತಿಗಳು ಜಾಗತಿಕ ಮಟ್ಟದ ಪ್ರಶಸ್ತಿಗಳಿಗೆ ಅರ್ಹವಾಗಿವೆ. ಆದರೆ 600ರಿಂದ 700 ಪುಟದ ಈ ಕೃತಿಗಳು ಭಾಷಾಂತರಗೊಂಡಾಗ 150 ಪುಟಗಳಿಗೆ ಇಳಿಸಲಾಗಿದೆ. ಕನ್ನಡ ಸಾಹಿತ್ಯದ ಮೌಲ್ಯ ಜಾಗತಿಕ ಮಟ್ಟದಲ್ಲಿ ಸಿಗಬೇಕಾದರೆ ಸಮರ್ಪಕವಾಗಿ ಭಾಷಾಂತರ ಮಾಡಬೇಕು’ ಎಂದರು.
‘ಇತ್ತೀಚೆಗೆ ಸೃಜನಶೀಲ ಸಾಹಿತ್ಯಕ್ಕೆ ಸಿಗುತ್ತಿರುವ ಮಹತ್ವ ವೈಚಾರಿಕ ಸಾಹಿತ್ಯ, ವಿಮರ್ಶೆಗೂ ಸಿಗುತ್ತಿದೆ. ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ ಎನ್ನುವುದರ ನಡುವೆ ಒಂದೇ ವೇದಿಕೆಯಲ್ಲಿ 15 ಪುಸ್ತಕಗಳು ಜನಾರ್ಪಣೆ ಆಗುತ್ತಿರುವುದು ಪುಸ್ತಕ ಓದುವವರ ಸಂಖ್ಯೆಯು ಹೆಚ್ಚುತ್ತಿದೆ ಎಂಬುದಕ್ಕೆ ಸಾಕ್ಷಿ’ ಎಂದು ಹೇಳಿದರು.
‘ಕನ್ನಡಪ್ರಭ’ ಪುರವಣಿ ಸಂಪಾದಕ ಗಿರೀಶ್ರಾವ್ ಹತ್ವಾರ್ (ಜೋಗಿ), ಲೇಖಕ ಡಿ.ವಿ.ಗುರುಪ್ರಸಾದ್, ಜಯಪ್ರಕಾಶ್ ನಾಗತಿಹಳ್ಳಿ, ಸಪ್ನ ಬುಕ್ ಹೌಸ್ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ, ಆರ್. ದೊಡ್ಡೇಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.