ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ‘ಗೊರುಚ ದತ್ತಿ ನಿಧಿ ಪ್ರಶಸ್ತಿ’ಗಳ
ಪ್ರದಾನ ಕಾರ್ಯಕ್ರಮವನ್ನು ಮೇ 18ರಂದು ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗದ ಮದಕರಿ ನಾಯಕ ವೃತ್ತದಲ್ಲಿರುವ ತ.ರಾ.ಸು. ರಂಗಮಂದಿರಲ್ಲಿ ಹಮ್ಮಿಕೊಳ್ಳಲಾಗಿದೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಪರಿಷತ್ತಿನ ಪ್ರದಾನ ಕಾರ್ಯದರ್ಶಿ ಎಸ್.ಬಿ. ಅಂಗಡಿ,‘2021ನೇ ಸಾಲಿನ ಪ್ರಶಸ್ತಿಗಳಿಗೆ ನಿವೃತ್ತ ಅಧ್ಯಾಪಕ ಜಿ.ಎ.ಶಿವಲಿಂಗಯ್ಯ
(ಗೊರುಚ ಶರಣ ಪ್ರಶಸ್ತಿ), ಪತ್ರಾಂಕಿತ ನಿವೃತ್ತ ವ್ಯವಸ್ಥಾಪಕ ಜೀನಹಳ್ಳಿ ಸಿದ್ಧಲಿಂಗಪ್ಪ (ಗೊರುಚ ಜಾನಪದ ಪ್ರಶಸ್ತಿ), ನಿವೃತ್ತ ಅಧ್ಯಾಪಕಿ ವಿಜಯಾದೇವಿ (ಗೊರುಚ ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿ) ಹಾಗೂ ಉಪನ್ಯಾಸಕ ಎನ್.ಎನ್.ಚಿಕ್ಕಮಾದು (ಜನಪದ ಸಾಹಿತ್ಯ ಗ್ರಂಥ ಪ್ರಶಸ್ತಿ) ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಅವರು ತಿಳಿಸಿದರು.
‘ಶರಣ ಮತ್ತು ಜಾನಪದ ಪ್ರಶಸ್ತಿಗಳು ತಲಾ ₹25 ಸಾವಿರ ನಗದು ಹಾಗೂ ಗ್ರಂಥ ಪ್ರಶಸ್ತಿಗಳು ತಲಾ ₹10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿವೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಅತಿ ಹೆಚ್ಚು ಅಂಕ ಪಡೆದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯೊಬ್ಬರಿಗೆ ₹5 ಸಾವಿರ ನಗದು ಬಹುಮಾನ ನೀಡಲಾಗುವುದು’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.