ಬೆಂಗಳೂರು: ಖರೀದಿ ನೆಪದಲ್ಲಿ ಚಿನ್ನದ ಗಟ್ಟಿಗಳನ್ನು ಕೊಂಡೊಯ್ದು ಹಣ ನೀಡದೆ ವಂಚಿಸಿದ್ದ ಆರೋಪದಡಿ ಸೂರಜ್ ಬಾಗಲ್ (31) ಎಂಬಾತನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
‘ಮಹಾರಾಷ್ಟ್ರದ ಸತಾರ ಜಿಲ್ಲೆಯ ಆರೋಪಿ ಸೂರಜ್ ವಿರುದ್ಧ ಇದೇ 5ರಂದು ಪ್ರಕರಣ ದಾಖಲಾಗಿತ್ತು. ಆತನಿಂದ 900 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ಸಿದ್ದೇಶ್ವರ ಎಂಬುವರು ಠಾಣೆ ವ್ಯಾಪ್ತಿಯ ಸಿಟಿ ಸ್ಟ್ರೀಟ್ ರಸ್ತೆಯಲ್ಲಿ ಚಿನ್ನಾಭರಣ ಮಾರಾಟ ಮಳಿಗೆ ಇಟ್ಟುಕೊಂಡಿದ್ದಾರೆ. ತಿಂಗಳ ಹಿಂದಷ್ಟೇ ಅಂಗಡಿಗೆ ಬಂದಿದ್ದ ಆರೋಪಿ, ತಾನೊಬ್ಬ ಚಿನ್ನದ ವ್ಯಾಪಾರಿ ಎಂದು ಹೇಳಿಕೊಂಡಿದ್ದ. ಹಣ ಕೊಟ್ಟು ಚಿನ್ನ ಖರೀದಿ ಸಹ ಮಾಡಿದ್ದ. ದೂರುದಾರರ ನಂಬಿಕೆ ಗಳಿಸಿದ್ದ’
‘ಇದೆ 5ರಂದು ಸಿದ್ದೇಶ್ವರಕ್ಕೆ ಕರೆ ಮಾಡಿದ್ದ ಆರೋಪಿ, ‘ಅಂಗಡಿ ಕೆಲಸಗಾರನನ್ನು ಕಳುಹಿಸುತ್ತೇವೆ. ಚಿನ್ನದ ಗಟ್ಟಿಗಳನ್ನು ಕೊಟ್ಟು ಗಳಿಸಿ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಹಾಕುತ್ತೇನೆ’ ಎಂದಿದ್ದ. ಅದನ್ನು ನಂಬಿ ದೂರುದಾರರು ಚಿನ್ನದ ಗಟ್ಟಿ ಕೊಟ್ಟು ಕಳುಹಿಸಿದ್ದರು. ಅದಾದ ನಂತರ ಆರೋಪಿ ನಾಪತ್ತೆಯಾಗಿದ್ದ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.