ADVERTISEMENT

ದೆಹಲಿಯಿಂದ ವಿಮಾನದಲ್ಲಿ ಬಂದ ಚಿನ್ನಾಭರಣ ಕಳ್ಳತನ: ಬಿ.ಎಸ್ಸಿ ಪದವೀಧರ ಬಂಧನ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2022, 4:36 IST
Last Updated 21 ಆಗಸ್ಟ್ 2022, 4:36 IST
   

ಬೆಂಗಳೂರು: ಆಭರಣ ಮಳಿಗೆಗಳಿಗೆ ಗ್ರಾಹಕರ ಸೋಗಿನಲ್ಲಿ ಭೇಟಿ ನೀಡಿ ಚಿನ್ನಾಭರಣ ಕದ್ದೊಯ್ಯುತ್ತಿದ್ದ ಆರೋ‍ಪಿ ರಾಹುಲ್ ಎಂಬುವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

‘ದೆಹಲಿ ನಿವಾಸಿ ರಾಹುಲ್, ಬಿ.ಎಸ್ಸಿ ಪದವೀಧರ. ವಿಮಾನದ ಮೂಲಕ ಆಗಾಗ ನಗರಕ್ಕೆ ಬಂದು ಕಳ್ಳತನ ಮಾಡಿಕೊಂಡು ವಾಪಸು ಹೋಗುತ್ತಿದ್ದ. ಈತನನ್ನು ಬಂಧಿಸಿ 120 ಗ್ರಾಂ ಚಿನ್ನಾಭರಣ ಹಾಗೂ ₹ 7 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ರಾಹುಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲಸ ಹೋಗಿತ್ತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆತ, ಕಳ್ಳತನಕ್ಕೆ ಇಳಿದಿದ್ದ.’

ADVERTISEMENT

‘ನಗರಕ್ಕೆ ಬರುತ್ತಿದ್ದ ಆರೋಪಿ, ಒಬ್ಬ ಅಥವಾ ಇಬ್ಬರು ಸಿಬ್ಬಂದಿ ಇರುವ ಮಳಿಗೆಗಳನ್ನು ಗುರುತಿಸುತ್ತಿದ್ದ. ಗ್ರಾಹಕರ ಸೋಗಿನಲ್ಲಿ ಮಳಿಗೆಗೆ ಭೇಟಿ ನೀಡಿ, ಚಿನ್ನಾಭರಣ ತೋರಿಸುವಂತೆ ಹೇಳುತ್ತಿದ್ದ. ಸಿಬ್ಬಂದಿ ಗಮನ ಬೇರೆಡೆ ಸೆಳೆದು, ಚಿನ್ನಾಭರಣ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದೆ’ ಎಂದು ತಿಳಿಸಿವೆ.

ಪತ್ನಿ ಖಾತೆಗೆ ಹಣ ಜಮೆ: ‘ಕದ್ದ ಆಭರಣಗಳನ್ನು ತ್ವರಿತವಾಗಿ ಮಾರಾಟ ಮಾಡುತ್ತಿದ್ದ ಆರೋಪಿ, ಬಂದ ಹಣವನ್ನು ಪತ್ನಿ ಖಾತೆಗೆ ಜಮೆ ಮಾಡುತ್ತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜಯನಗರ ಹಾಗೂ ಮಲ್ಲೇಶ್ವರದ ಆಭರಣ ಮಳಿಗೆಯಲ್ಲಿ ಕೃತ್ಯ ಎಸಗಿದ್ದ ಆರೋಪಿ ಮುಖಚಹರೆ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದೇ ಸುಳಿವು ಆಧರಿಸಿ ತನಿಖೆ ಕೈಗೊಂಡು ಈತನನ್ನು ಬಂಧಿಸಲಾಗಿದೆ’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.