ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಕಳ್ಳತನ ಮಾಡುತ್ತಿದ್ದ ಫುಡ್ ಡೆಲಿವರಿ ಬಾಯ್ ಸೇರಿ ಮೂವರು ಆರೋಪಿಗಳನ್ನು ಬೆಳ್ಳಂದೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೊಡತಿ ಗೇಟ್ನ ದೀಕ್ಷಿತ್, ಕ್ಲೆಂಟನ್ ಹಾಗೂ ಆಭರಣ ಅಂಗಡಿ ಮಾಲೀಕ ಮೋತಿಲಾಲ್ ಬಂಧಿತರು.
ಬಂಧಿತರಿಂದ 70 ಗ್ರಾಂ. ಚಿನ್ನ, ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಳ್ಳಂದೂರಿನ ನಿವಾಸಿ ಸುಧಾಕರ್ ಅವರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಮೂವರು ಆರೋಪಿಗಳನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ಡೆಲಿವರಿ ಬಾಯ್ ಆಗಿ ದೀಕ್ಷಿತ್ ಕೆಲಸ ಮಾಡುತ್ತಿದ್ದ. ಹೆಚ್ಚಿನ ಹಣ ಸಂಪಾದನೆಗಾಗಿ ಕಳ್ಳತನ ಮಾಡಲು ಮುಂದಾಗಿದ್ದ. ಮಾರ್ಚ್ 2ರಂದು ಬೆಳ್ಳಂದೂರಿನ ಶುಭಾ ಎನ್ಕ್ಲೇವ್ ಲೇಔಟ್ ಬಳಿ ಫುಡ್ ಡೆಲಿವರಿ ಮಾಡಲು ಬಂದಿದ್ದ. ಈ ವೇಳೆ ದೂರುದಾರರ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ, ತನ್ನ ಸ್ನೇಹಿತ ಕ್ಲೆಂಟನ್ನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದ. ಇಬ್ಬರೂ ಸೇರಿಕೊಂಡು ಮನೆಯಲ್ಲಿದ್ದ 210 ಗ್ರಾಂ. ಚಿನ್ನ ಹಾಗೂ ₹50 ಸಾವಿರ ನಗದು ಕಳ್ಳತನ ಮಾಡಿ ಪರಾರಿ ಆಗಿದ್ದರು. ಕದ್ದ ಚಿನ್ನವನ್ನು ಚಿನ್ನದ ವ್ಯಾಪಾರಿ ಮೋತಿಲಾಲ್ ಬಳಿ ಅಡಮಾನ ಇಟ್ಟಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಆರೋಪಿಗಳು ಚಿನ್ನವನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಟೀ ಅಂಗಡಿ ತೆರೆಯಲು ನಿರ್ಧರಿಸಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.