ADVERTISEMENT

ಎರಡನೇ ದಿನಕ್ಕೆ ಲಾರಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 20:11 IST
Last Updated 19 ಜೂನ್ 2018, 20:11 IST
ನಗರದ ಹೊರವಲಯದ ಮಾದಾವರ ಬಳಿ ನಿಲ್ಲಿಸಲಾಗಿರುವ ಟ್ರಕ್‌ಗಳು
ನಗರದ ಹೊರವಲಯದ ಮಾದಾವರ ಬಳಿ ನಿಲ್ಲಿಸಲಾಗಿರುವ ಟ್ರಕ್‌ಗಳು   

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್‌ ದರ ಹಾಗೂ ವಾಹನಗಳ ‘ಥರ್ಡ್‌ ಪಾರ್ಟಿ’ ವಿಮೆ ಕಂತು ಹೆಚ್ಚಿಸಿರುವುದನ್ನು ಖಂಡಿಸಿ, ಅಖಿಲ ಭಾರತೀಯ ಸರಕು ಸಾಗಣೆ ವಾಹನಗಳ ಮಾಲೀಕರ ಒಕ್ಕೂಟ ಕರೆ ನೀಡಿದ್ದ ಅನಿರ್ದಿಷ್ಟ ಅವಧಿಯ ಮುಷ್ಕರ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ತುಮಕೂರು, ಮೈಸೂರು, ಹೊಸೂರು ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಕೆಲವೆಡೆ ಲಾರಿಗಳು ಸಾಲುಗಟ್ಟಿ ನಿಂತಿದ್ದರೆ, ಸಾಗಣೆಯಾಗಬೇಕಾಗಿದ್ದ ಸರಕುಗಳನ್ನು ತಲುಪಿಸಲು ಅವಕಾಶ ಕಲ್ಪಿಸಿದ್ದರಿಂದ ಅಲ್ಲಲ್ಲಿ ಲಾರಿಗಳು ಸಂಚರಿಸುತ್ತಿದ್ದುದು ಕಂಡುಬಂತು.

ನಗರದಲ್ಲಿ ಹಣ್ಣು–ತರಕಾರಿ, ಹಾಲು ಮುಂತಾದ ಅಗತ್ಯ ವಸ್ತುಗಳ ಸಾಗಣೆಗೆ ಯಾವುದೇ ಅಡ್ಡಿ ಉಂಟಾಗಲಿಲ್ಲ. ಮುಷ್ಕರದ ಎರಡನೇ ದಿನ ಟ್ರಕ್‌ ಟರ್ಮಿನಲ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಾರಿಗಳು ನಿಂತಿದ್ದವು.

ADVERTISEMENT

‘ಮುಷ್ಕರ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಬೇಡಿಕೆ ಈಡೇರಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಇದುವರೆಗೆ ಯಾವುದೇ ಭರವಸೆ ಸಿಕ್ಕಿಲ್ಲ. ಬುಧವಾರ ಸಂಜೆ ಸಭೆನಡೆಸಿ ಮುಷ್ಕರದ ಮುಂದಿನ ಸ್ವರೂಪದ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಅಖಿಲ ಭಾರತೀಯ ಸರಕು ಸಾಗಣೆ ವಾಹನಗಳ ಮಾಲೀಕರಒಕ್ಕೂಟದ ಅಧ್ಯಕ್ಷ ಬಿ. ಚನ್ನಾರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.