ADVERTISEMENT

ಒಳರೋಗಿ ಚಿಕಿತ್ಸೆ ನಿರ್ಬಂಧದಿಂದ ಸೇವೆ ವ್ಯತ್ಯಯ: ಸರ್ಕಾರಿ ವೈದ್ಯಾಧಿಕಾರಿಗಳ ಸಂಘ

ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿದ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 15:50 IST
Last Updated 3 ಫೆಬ್ರುವರಿ 2026, 15:50 IST
   

ಬೆಂಗಳೂರು: ‘ಸರ್ಕಾರಿ ವೈದ್ಯರು ಕರ್ತವ್ಯದ ಬಳಿಕ ಖಾಸಗಿ ವ್ಯವಸ್ಥೆಯಡಿ ನೀಡುತ್ತಿದ್ದ ಒಳರೋಗಿಗಳ ಚಿಕಿತ್ಸೆಗೆ ನಿರ್ಬಂಧ ವಿಧಿಸಿರುವುದರಿಂದ, ಗ್ರಾಮೀಣ ಭಾಗದ ರೋಗಿಗಳ ಆರೋಗ್ಯ ಸೇವೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ನುರಿತ ಶಸ್ತ್ರಚಿಕಿತ್ಸಕರ ಸೇವೆಯಿಂದ ಜನರು ವಂಚಿತರಾಗುತ್ತಾರೆ’ ಎಂದು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹೇಳಿದೆ. 

‘ಹಾಗೆಂದ ಮಾತ್ರಕ್ಕೆ, ಸರ್ಕಾರಿ ಆಸ್ಪತ್ರೆಯ ಕರ್ತವ್ಯದ ಅವಧಿಯಲ್ಲಿ ಖಾಸಗಿ ಸೇವೆ ನೀಡುವಂತಹ ವೈದ್ಯರಿಗೆ ಸಂಘ ಯಾವುದೇ ಬೆಂಬಲ ವ್ಯಕ್ತಪಡಿಸುವುದಿಲ್ಲ’ ಎಂದು ಸಂಘ ತಿಳಿಸಿದೆ. 

‘ಸರ್ಕಾರಿ ವೈದ್ಯರನ್ನು ಗುರಿಯಾಗಿಸಿಕೊಂಡು ಸರ್ಕಾರವು ಮನಸೋ ಇಚ್ಛೆ ಆದೇಶಗಳನ್ನು ಹೊರಡಿಸುತ್ತಿರುವ ಪರಿಣಾಮ, ವೈದ್ಯರ ಆತ್ಮಸ್ಥೈರ್ಯ ಕುಗ್ಗುವ ಜತೆಗೆ ಸರ್ಕಾರಿ ಕರ್ತವ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತಿವೆ’ ಎಂದು ಸಂಘದ ಅಧ್ಯಕ್ಷ ಡಾ. ರವೀಂದ್ರನಾಥ್ ಮೇಟಿ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಾಲ್ಕು ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿಗಾಗಿ ಹಲವು ಬಾರಿ ಸಭೆ ನಡೆಸಿ, ಮನವಿ ಸಲ್ಲಿಸಿದರೂ ಅದು ಕಾರ್ಯಗತವಾಗಿಲ್ಲ. ವೈದ್ಯರ ಜ್ಯೇಷ್ಠತಾಪಟ್ಟಿಯನ್ನು ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಪರಿಷ್ಕರಿಸಬೇಕೆಂಬ ನಿಯಮವಿದ್ದರೂ, 13 ವರ್ಷಗಳಿಂದ ಪರಿಷ್ಕರಿಸಿಲ್ಲ. ಇದರಿಂದ ವೈದ್ಯರು ಮುಂಬಡ್ತಿಯಿಂದ ವಂಚಿತರಾಗುತ್ತಿದ್ದಾರೆ’ ಎಂದು ಹೇಳಿರುವ ಅವರು, ವೇತನ ತಾರತಮ್ಯ, ಖಾಲಿ ಹುದ್ದೆಗಳ ಭರ್ತಿಯಾಗದಿರುವುದು ಸೇರಿ 15 ಅಂಶಗಳನ್ನು ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

‘ಸರ್ಕಾರಿ ವೈದ್ಯರಿಗೆ ಆಗುತ್ತಿರುವ ಅನ್ಯಾಯಗಳಿಗೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನಹರಿಸಬೇಕು. ಇಲ್ಲವಾದಲ್ಲಿ, ಸಂಘವು ಹೋರಾಟದ ಹಾದಿ ಹಿಡಿಯುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.