ADVERTISEMENT

ಸರ್ಕಾರಿ ಕಾಮಗಾರಿ ಗುತ್ತಿಗೆ ಆಮಿಷ: ₹ 22.72 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 22:00 IST
Last Updated 23 ಡಿಸೆಂಬರ್ 2022, 22:00 IST
   

ಬೆಂಗಳೂರು: ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಹಾಗೂ ಕಡಿಮೆ ಬೆಲೆಗೆ ಚಿನ್ನ ಕೊಡಿಸುವ ಆಮಿಷವೊಡ್ಡಿ ಸಿವಿಲ್ ಗುತ್ತಿಗೆದಾರರೊಬ್ಬರಿಂದ ₹ 22.72 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಯಲಹಂಕ ನಿವಾಸಿಯಾಗಿರುವ 30 ವರ್ಷದ ಗುತ್ತಿಗೆದಾರರೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿಗಳು ಎನ್ನಲಾದ ಸೈಯದ್ ರೆಹಮತ್‌ ಉಲ್ಲಾ, ಸೈಯದ್ ಖಾದರ್ ಹಾಗೂ ಸೈಯದ್ ಹುಸೇನ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರರಿಗೆ ಕೆಲ ವರ್ಷಗಳ ಹಿಂದೆಯಷ್ಟೇ ಆರೋಪಿ ರೆಹಮತ್‌ ಉಲ್ಲಾ ಪರಿಚಯವಾಗಿತ್ತು. ‘ರಾಜ್ಯ ಸರ್ಕಾರದ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ನನಗೆ ಪರಿಚಯ. ಅವರಿಗೆ ಹೇಳಿ ಕಾಮಗಾರಿ ಗುತ್ತಿಗೆ ಕೊಡಿಸುತ್ತೇನೆ’ ಎಂದು ಆರೋಪಿ ಆಮಿಷವೊಡ್ಡಿದ್ದ. ನಂತರ, ₹ 4 ಲಕ್ಷ ಪಡೆದುಕೊಂಡಿದ್ದ. ಇದಾದ ಬಳಿಕ ಆರೋಪಿ ಯಾವುದೇ ಕಾಮಗಾರಿ ಕೊಡಿಸಿರಲಿಲ್ಲ.’

ADVERTISEMENT

‘ಆರೋಪಿ ವರ್ತನೆಯನ್ನು ದೂರುದಾರ ಪ್ರಶ್ನಿಸಿದ್ದರು. ಸದ್ಯದಲ್ಲೇ ಕಾಮಗಾರಿ ಕೊಡಿಸುವುದಾಗಿ ಪುನಃ ಹೇಳಿದ್ದ ಆರೋಪಿ, ‘ದುಬೈನಲ್ಲಿರುವ ಸಂಬಂಧಿಕರೊಬ್ಬರ ಬಳಿ ಚಿನ್ನವಿದೆ. ಅದನ್ನು ಕಡಿಮೆ ಬೆಲೆಗೆ ಕೊಡಿಸುತ್ತೇನೆ’ ಎಂದಿದ್ದ. ಅದನ್ನೂ ನಂಬಿದ್ದ ದೂರು ದಾರ, ₹ 22.72 ಲಕ್ಷ ನೀಡಿದ್ದ. ಹಣ ಪಡೆದಿದ್ದ ಆರೋಪಿಗಳು, ಯಾವುದೇ ಚಿನ್ನಾಭರಣ ಕೊಟ್ಟಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಕೊಲೆ ಬೆದರಿಕೆಯೊಡ್ಡಿದ್ದರಿಂದ ದೂರು ದಾರರು ಆರೋಪಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.