ADVERTISEMENT

ಬೆಂಗಳೂರು ಜೈಲಿನಲ್ಲಿ ಹೈ ಸೆಕ್ಯುರಿಟಿ ವಾರ್ಡ್‌

ಇವಿಎಂ, ವಿವಿಪ್ಯಾಟ್‌ ರಕ್ಷಣೆಗೆ ಗೋದಾಮು l ಭೂ ಒತ್ತುವರಿ ತೆರವು ಸಮಿತಿಗೆ ಬೋಪಯ್ಯ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 6:00 IST
Last Updated 18 ಜನವರಿ 2020, 6:00 IST
   

ಬೆಂಗಳೂರು: ನಗರದ ಕೇಂದ್ರ ಕಾರಾಗೃಹದಲ್ಲಿ ಅತಿ ಭದ್ರತಾ ವಾರ್ಡ್‌ (ಹೈ ಸೆಕ್ಯುರಿಟಿ ವಾರ್ಡ್‌) ನಿರ್ಮಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಈ ಉದ್ದೇಶಕ್ಕಾಗಿ ₹100 ಕೋಟಿ ಮತ್ತು ವಿಜಯಪುರ ಕಾರಾಗೃಹದಲ್ಲಿ ಹೊಸ ಬ್ಲಾಕ್‌ ನಿರ್ಮಿಸಲು ₹99.98 ಕೋಟಿ ನೀಡಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಅತಿ ಭದ್ರತಾ ವಾರ್ಡ್‌ನಲ್ಲಿ ಕುಖ್ಯಾತ ಗೂಂಡಾಗಳು, ಭಯೋತ್ಪಾದಕರು ಮತ್ತು ನಕ್ಸಲೀಯರನ್ನು ಇರಿಸ
ಲಾಗುವುದು. ಕೋರ್ಟ್‌ ಆದೇಶದ ಮೇರೆಗೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.

ADVERTISEMENT

ಬೋಪಯ್ಯ ಅಧ್ಯಕ್ಷ: ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿಯನ್ನು ಪುನರ್‌ ರಚಿಸಿರುವ ರಾಜ್ಯ ಸರ್ಕಾರ, ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ.

ಹಿಂದೆ ಶಾಸಕ ಎ.ಟಿ.ರಾಮಸ್ವಾಮಿ ಅಧ್ಯಕ್ಷತೆಯ ಸಮಿತಿ ರಚಿಸಲಾಗಿತ್ತು. ಅದನ್ನು ಈಗ ಪುನಾರಚನೆ ಮಾಡಲು ಸಂಪುಟ ಸಭೆ ನಿರ್ಧರಿಸಿದೆ. ನೂತನ ಸಮಿತಿಯಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ, ಎಸ್‌.ಆರ್‌.ವಿಶ್ವನಾಥ್‌, ಎ.ಟಿ.ರಾಮಸ್ವಾಮಿ, ರಾಜಶೇಖರ ಬಸವರಾಜ ಪಾಟೀಲ, ರಾಜೂಗೌಡ ಸದಸ್ಯರಾಗಿರುತ್ತಾರೆ. ಒತ್ತುವರಿಯನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದೆ ಎಂದರು.

2006 ರಲ್ಲಿ ಭೂಕಬಳಿಕೆಗೆ ಸಂಬಂಧಿಸಿ ವರದಿ ನೀಡಲು ಅಂದು ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಜಂಟಿ ಸದನ ಸಮಿತಿ ರಚಿಸಲಾಗಿತ್ತು. ಈ ಸಮಿತಿ ವರದಿಯ ಪ್ರಕಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ 13,614.37 ಎಕರೆ ಭೂಮಿ ಒತ್ತುವರಿ ಪತ್ತೆ ಮಾಡಿತ್ತು. ಬಳಿಕ ಒತ್ತುವರಿ ತೆರವಿಗೆ ರಾಮಸ್ವಾಮಿ ನೇತೃತ್ವದ ಸಮಿತಿ ರಚಿಸಲಾಗಿತ್ತು.

lಪೀಣ್ಯದ ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ವಸಾಹತು, ಹುಬ್ಬಳ್ಳಿಯ ಎಂ.ಟಿ.ಸಾಗರ್‌ ವಸಾಹತುವಿನಲ್ಲಿ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಕ್ರಮವಾಗಿ ₹50 ಕೋಟಿ ಮತ್ತು ₹18 ಕೋಟಿ ನಿಗದಿ.

lಅಕ್ರಮ ಗಣಿಗಾರಿಕೆ ತನಿಖೆಗೆ ಲೋಕಾಯುಕ್ತ ರಚಿಸಿದ್ದ ವಿಶೇಷ ತನಿಖಾ ತಂಡದ ಕಾರ್ಯ ಅವಧಿ ಒಂದು ವರ್ಷಕ್ಕೆ ವಿಸ್ತರಣೆ.

lಚುನಾವಣಾ ಆಯೋಗದ ಇವಿಎಂ ಮತ್ತು ವಿವಿಪ್ಯಾಟ್‌ಗಳ ಸಂರಕ್ಷಣೆ ಮತ್ತು ಭದ್ರತೆಗಾಗಿ ಎಲ್ಲ ಜಿಲ್ಲೆಗಳಲ್ಲಿ ಗೋದಾಮುಗಳನ್ನು ಸ್ಥಾಪಿಸಲು ₹123 ಕೋಟಿ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ.

lಬೆಂಗಳೂರು ಜಿಲ್ಲೆಯ ಮಾದನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಮಾದಾವರ ಮತ್ತು ಸಿದ್ದನ ಹೊಸಹಳ್ಳಿ ಸೇರಿಸಿ ಪುರಸಭೆ ರಚಿಸಲು ತೀರ್ಮಾನ.

lಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ 450 ಹಾಸಿಗೆ ಸಾಮರ್ಥ್ಯದ ಮಕ್ಕಳ ಹೊಸ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ₹132.31 ಕೋಟಿ ಬಿಡುಗಡೆಗೆ ಅನುಮತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.