ಬೆಂಗಳೂರು: ‘ವಕೀಲರ ಕಲ್ಯಾಣಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಕುರಿತಂತೆ ಮುಂಬರುವ ರಾಜ್ಯ ಬಜೆಟ್ನಲ್ಲಿ ₹ 100 ಕೋಟಿ ಅನುದಾನ ಮೀಸಲಿಡಬೇಕು ಎಂಬ ನಮ್ಮ ಮನವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ರಾಜ್ಯ ವಕೀಲರ ಪರಿಷತ್ ತಿಳಿಸಿದೆ.
ಈ ವಿಷಯವನ್ನು ಶುಕ್ರವಾರ ಸುದ್ದಿಗಾರರಿಗೆ ವಿವರಿಸಿದ ಪರಿಷತ್ ಅಧ್ಯಕ್ಷ ಜೆ.ಎಂ.ಅನಿಲ್ ಕುಮಾರ್, ‘ರಾಜ್ಯದ ವಿವಿಧೆಡೆ ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ದಾಳಿ ತಡೆಗಟ್ಟಲು ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಲು ಮನವಿ ಮಾಡಲಾಗಿದೆ’ ಎಂದರು.
‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಸಮುದಾಯದ ವಕೀಲರಿಗೆ ಈಗ ನೀಡಲಾಗುತ್ತಿರುವ ಸ್ಟೈಪಂಡ್ ಅನ್ನು ಎಲ್ಲಾ ವರ್ಗಗಳ ಆರ್ಥಿಕವಾಗಿ ಹಿಂದುಳಿದವರಿಗೂ ವಿಸ್ತರಿಸಬೇಕು. ಯುವ ವಕೀಲರಿಗೆ ವೃತ್ತಿ ತರಬೇತಿ ನೀಡುವ ದಿಸೆಯಲ್ಲಿ ಮಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರ್ಗಿಗಳಲ್ಲಿ ಅಕಾಡೆಮಿಗಳನ್ನು ಸ್ಥಾಪಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಆದ್ದರಿಂದ ಈ ವರ್ಷ ಒಂದಾದರೂ ಅಕಾಡೆಮಿ ಕೇಂದ್ರ ಸ್ಥಾಪಿಸಬೇಕು. ತಾಲ್ಲೂಕು ಕೇಂದ್ರದಲ್ಲಿ ಇ–ಲೈಬ್ರರಿ ಸ್ಥಾಪಿಸಲು ಕೋರಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.