ADVERTISEMENT

ಮುಡಾ ಪ್ರಕರಣ | ರಾಜ್ಯಪಾಲರ ಕ್ರಮ: ಸಾಹಿತಿಗಳ ಆಕ್ರೋಶ

‘ಪ್ರಜಾಪ್ರಭುತ್ವಕ್ಕಾಗಿ ನಾವು- ಸಮಾನ ಮನಸ್ಕರು’ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 16:20 IST
Last Updated 19 ಆಗಸ್ಟ್ 2024, 16:20 IST
ರಾಜ್ಯಪಾಲರ ಕ್ರಮ ಖಂಡಿಸಿ, ಪ್ರಜಾಪ್ರಭುತ್ವಕ್ಕಾಗಿ ನಾವು-ಸಮಾನ ಮನಸ್ಕರು’ ಸಂಘಟನೆ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಹಿತಿಗಳು, ರಂಗಕರ್ಮಿಗಳು, ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು 
ರಾಜ್ಯಪಾಲರ ಕ್ರಮ ಖಂಡಿಸಿ, ಪ್ರಜಾಪ್ರಭುತ್ವಕ್ಕಾಗಿ ನಾವು-ಸಮಾನ ಮನಸ್ಕರು’ ಸಂಘಟನೆ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಹಿತಿಗಳು, ರಂಗಕರ್ಮಿಗಳು, ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು    

ಬೆಂಗಳೂರು: ಮುಡಾ’ ನಿವೇಶನ ಹಂಚಿಕೆ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ‘ಪ್ರಜಾಪ್ರಭುತ್ವಕ್ಕಾಗಿ ನಾವು-ಸಮಾನ ಮನಸ್ಕರು’ ಸಂಘಟನೆ ನೇತೃತ್ವದಲ್ಲಿ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಹಿತಿಗಳು, ರಂಗಕರ್ಮಿಗಳು, ಸಾಮಾಜಿಕ ಕಾರ್ಯಕರ್ತರೂ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸೋಮವಾರ ಪ್ರತಿಭಟಿಸಿದರು.

ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. 

ಸಾಹಿತಿ ಅರವಿಂದ ಮಾಲಗತ್ತಿ ಮಾತನಾಡಿ, ‘ಬಿಜೆಪಿಯವರು ಸಂವಿಧಾನ ಪರ ಇದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಅದೇ ಸಂವಿಧಾನಾತ್ಮಕವಾಗಿ ಅಧಿಕಾರಕ್ಕೆ ಬಂದವರ ಮೇಲೆ ಅಸಂವಿಧಾನಿಕವಾಗಿ ಷಡ್ಯಂತ್ರ ರಾಜಕಾರಣ ನಡೆಸುತ್ತಿದ್ದಾರೆ’ ಎಂದು ಆಕ್ರೋಶ ಹೊರಹಾಕಿದರು.  

ADVERTISEMENT

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ರಾಜ್ಯಪಾಲರು ತನಿಖೆಗೆ ಆದೇಶ ನೀಡುವ ಮೂಲಕ ಮಲಗಿರುವ ಕನ್ನಡಗಿರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಸಂವಿಧಾನ ಉಳಿಸಲು ಎಲ್ಲರೂ ಒಗ್ಗಟ್ಟು ಪ್ರದರ್ಶಿಸುವ ಸಮಯ ಮತ್ತೆ ಬಂದಿದೆ. ಸಂವಿಧಾನವನ್ನು ಕಾಪಾಡುವುದು ಕನ್ನಡಿಗರ ರಕ್ತಗತವಾದ ಗುಣ’ ಎಂದು ಪ್ರತಿಪಾದಿಸಿದರು.

‘ಥಾವರ್‌ಚಂದ್ ಗೆಹಲೋತ್‌ ಅವರಿಗೆ ಎಲ್ಲಿಯೂ ಜಾಗ ಸಿಗದ ಕಾರಣ ನಮ್ಮ ರಾಜ್ಯಕ್ಕೆ ಬಂದಿದ್ದಾರೆ. ಕನ್ನಡಿಗರ ಆಶ್ರಯದಲ್ಲಿ ನೆಲದಲ್ಲಿದ್ದಾರೆ. ಇವರು ನಮ್ಮ ನಾಯಕರನ್ನು ಕೆದಕಿದ್ದಾರೆ’ ಎಂದು ಹೇಳಿದರು. 

ಲೇಖಕಿ ವಿಜಯಮ್ಮ ಮಾತನಾಡಿ, ‘ಅಸಂವಿಧಾನಿಕವಾಗಿ ರಾಜ್ಯದ ಮೇಲೆ ಕಣ್ಣು ಹಾಕಿರುವ ಶಕ್ತಿಗಳ ವಿರುದ್ಧ ಹೋರಾಟ ಅನಿವಾರ್ಯ’ ಎಂದರು.

‘ಸಿದ್ದರಾಮಯ್ಯ ಅವರನ್ನು ಪಲ್ಲಟಗೊಳಿಸುವ ಕೆಲಸವನ್ನು ರಾಜ್ಯಪಾಲರ ಮೂಲಕ ಮನುವಾದಿ ಮನಃಸ್ಥಿತಿಗಳು ಮಾಡುತ್ತಿವೆ. ರಾಜ್ಯಪಾಲರ ನಡೆಗೆ ನಮ್ಮ ವಿರೋಧ ಇದೆ’ ಎಂದು ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯಲ್ಲಿ ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು, ಸಾಹಿತಿಗಳಾದ ಕೆ. ಮರುಳಸಿದ್ದಪ್ಪ, ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್‌, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ, ಪತ್ರಕರ್ತ ದಿನೇಶ್ ಅಮಿನ್‌ ಮಟ್ಟು, ಶಿಕ್ಷಣ ತಜ್ಞ ಬಿ.ಶ್ರೀಪಾದ್ ಭಟ್, ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಹೋರಾಟಗಾರ್ತಿ ಕೆ.ಎಸ್.ವಿಮಲಾ, ರಾಜಪ್ಪ ದಳವಾಯಿ, ವಿಚಾರವಾದಿಗಳ ವೇದಿಕೆಯ ನಾಗೇಶ್ ಅರಳಕುಪ್ಪೆ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.