
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ನಡೆಯಬೇಕಿರುವ ಚುನಾವಣೆಗಳ ಸಿದ್ಧತೆಗಾಗಿ ಉನ್ನತ ಮಟ್ಟದ ಉಸ್ತುವಾರಿ ಸಮಿತಿಯನ್ನು ಜೆಡಿಎಸ್ ರಚಿಸಿದೆ.
ಇದೇ 16ರಂದು ನಡೆದಿದ್ದ ಪಕ್ಷದ ಪ್ರಮುಖರ ಸಭೆಯಲ್ಲಿ ಉಸ್ತುವಾರಿ ಸಮಿತಿ ರಚನೆಗೆ ನಿರ್ಧಾರ ಮಾಡಲಾಗಿತ್ತು. ಅದರಂತೆ ಸಮಿತಿಯನ್ನು ರಚಿಸಿ, ಪಕ್ಷದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ.
ಪಕ್ಷದ ಒಂಬತ್ತು ಹಿರಿಯ ನಾಯಕರನ್ನು ಈ ಸಮಿತಿಯು ಹೊಂದಿದೆ. ಶಾಸಕರಾದ ಎ.ಮಂಜು, ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್ತಿನ ಸದಸ್ಯರಾದ ಟಿ.ಎ.ಶರವಣ, ಟಿ.ಎನ್.ಜವರಾಯಿಗೌಡ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಕ್ಷದ ನಾಯಕರಾದ ಎಂ.ಕೃಷ್ಣಾರೆಡ್ಡಿ, ಸುರೇಶ್ ಗೌಡ, ಎ.ಮಂಜುನಾಥ್ ಮತ್ತು ಕೆ.ಎ.ತಿಪ್ಪೇಸ್ವಾಮಿ ಅವರು ಈ ಸಮಿತಿಯಲ್ಲಿ ಇದ್ದಾರೆ.
ಜಿಬಿಎಯ ಐದೂ ಪಾಲಿಕೆಗಳಲ್ಲಿ ವಾರ್ಡ್ವಾರು ಉಸ್ತುವಾರಿ ಸಮಿತಿಗಳನ್ನು ರಚಿಸುವ, ಸದಸ್ಯತ್ವ ನೋಂದಣಿ ಅಭಿಯಾನ ನಡೆಸುವ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ, ಉಪಸಮಿತಿಗಳ ಮೇಲ್ವಿಚಾರಣೆ ಮತ್ತು ಬಿಜೆಪಿ ಜತೆಗೆ ಸಮನ್ವಯ ಸಾಧಿಸುವ ಹೊಣೆಗಾರಿಕೆಯನ್ನು ಈ ಸಮಿತಿಗೆ ನೀಡಲಾಗಿದೆ ಎಂದು ಜೆಡಿಎಸ್ನ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.