ADVERTISEMENT

ಅರ್ಹರಿಗೆ ತಲುಪದ ‘ಗ್ಯಾರಂಟಿ’: ಸದಸ್ಯರ ಆಕ್ಷೇಪ

ಬೆಂಗಳೂರು ದಕ್ಷಿಣ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 16:38 IST
Last Updated 8 ಜೂನ್ 2025, 16:38 IST
ಸಭೆಯಲ್ಲಿ ಸಿಡಿಪಿಒ ಆರತಿ, ತಾ.ಪಂ. ಇಒ ಜಿ.ಬಿಂದು, ಸಮಿತಿ ಅಧ್ಯಕ್ಷ ಶ್ರೀಧರ್ ಲಕ್ಷ್ಮಣ್ ಹಾಜರಿದ್ದರು
ಸಭೆಯಲ್ಲಿ ಸಿಡಿಪಿಒ ಆರತಿ, ತಾ.ಪಂ. ಇಒ ಜಿ.ಬಿಂದು, ಸಮಿತಿ ಅಧ್ಯಕ್ಷ ಶ್ರೀಧರ್ ಲಕ್ಷ್ಮಣ್ ಹಾಜರಿದ್ದರು   

ರಾಜರಾಜೇಶ್ವರಿನಗರ: ಕಡುಬಡವರು, ಕೂಲಿಕಾರ್ಮಿಕರಿಗೆ ಗ್ಯಾರಂಟಿ ಯೋಜನೆ ತಲುಪುತ್ತಿಲ್ಲ. ಕೆಲವರ ಬಿಪಿಎಲ್‌ ಕಾರ್ಡ್‌ಗಳು ರದ್ದಾಗಿವೆ. ಬಡವರಿಗೆ ಸರಿಯಾಗಿ ಪಡಿತರ ಸಿಗುತ್ತಿಲ್ಲ, ಆದರೆ, ಸಿರಿವಂತರು, ಸರ್ಕಾರಿ ಅಧಿಕಾರಿಗಳ ಕುಟುಂಬದವರು ಪಡಿತರ ಕಾರ್ಡ್‌ನ ಲಾಭ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕಿನ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಸದಸ್ಯರಾದ  ಟಿ.ಎಲ್.ಕೆಂಪೇಗೌಡ, ಎಚ್.ಈರಯ್ಯ , ಸಿ.ಎನ್.ಮೂರ್ತಿ, ರಾಮೋಹಳ್ಳಿ ರವಿಕುಮಾರ್, ಕೃಷ್ಣಪ್ಪ ಮತ್ತು ಕೆ.ಎಂ.ಮಹೇಶ್ ಕುಮಾರ್ ಈ ಬಗ್ಗೆ ವಿಷಯ ಪ್ರಸ್ತಾಪಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಮಿತಿ ಅಧ್ಯಕ್ಷ ಶ್ರೀಧರ್ ಲಕ್ಷ್ಮಣ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸದಸ್ಯರು, ‘ಆಹಾರ ಇಲಾಖೆಯ ಯಡವಟ್ಟಿನಿಂದಾಗಿ ಬಡವರಿಗೆ ಎಪಿಎಲ್ ಕಾರ್ಡ್ ಸಿಗುವಂತಾಗಿದೆ. ಬಡವರು ಏನು ತಪ್ಪುಮಾಡಿದ್ದಾರೆ’ ಎಂದು ಪ್ರಶ್ನಿಸಿದರು.‌

ADVERTISEMENT

‘ದ್ವಿಚಕ್ರವಾಹನ, ಮನೆ ನಿರ್ಮಾಣಕ್ಕೆ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವ ಕೆಲ ಬಡ, ಮಧ್ಯಮ ವರ್ಗದವರನ್ನು ಆದಾಯ ತೆರಿಗೆ ಪಾವತಿದಾರರು ಎಂದು ಪರಿಗಣಿಸಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುತ್ತಿದೆ. ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪುತ್ತಿಲ್ಲ’ ಎಂದು ದೂರಿದರು.

‘ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗ ಈ ಸಮಸ್ಯೆಗಳನ್ನು ಬಗೆಹರಿಸಿ, ಬಡವರಿಗೆ ಸರ್ಕಾರದ ಯೋಜನೆಗಳು ತಲುಪುವಂತೆ‘ ಮಾಡಬೇಕು ಎಂದು ಆಗ್ರಹಿಸಿದರು.

‘ಹೊಸದಾಗಿ ಬಿಪಿಎಲ್ ಕಾರ್ಡ್‌ ಮಾಡಿಸಲು, ಕಾರ್ಡ್‌ನಲ್ಲಿ ಮಕ್ಕಳ ಹೆಸರು ಸೇರಿಸಲು ನಾಲ್ಕೈದು ಸಾವಿರ ರೂಪಾಯಿ ಕೊಟ್ಟರೆ ನಾಲ್ಕೇ ದಿನದಲ್ಲಿ ಕೆಲಸ ಮಾಡಿಕೊಡುತ್ತಾರೆ. ಹಣ ಕೊಡದಿದ್ದರೆ ಸಬೂಬು ಹೇಳಿ ನಿಧಾನ ಮಾಡುತ್ತಾರೆ. ಕೆಲವು ಕಡೆ ಪಡಿತರ ಬಂದ ಎರಡೇ ದಿನಗಳಲ್ಲಿ ಖಾಲಿಯಾಗಿದೆ ಎಂದು ಹೇಳಿ ಕಳಿಸುತ್ತಾರೆ. ತೂಕದಲ್ಲೂ ಮೋಸ ಮಾಡುತ್ತಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ರಾಮೋಹಳ್ಳಿ ರವಿಕುಮಾರ್, ಶಂಕರ್, ಲೋಕನಾಥ್ ಆರೋಪಿಸಿದರು. ಉಳಿದ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು.

‘ಈ ಅವ್ಯವಸ್ಥೆಯನ್ನು ಜಿಲ್ಲಾಧಿಕಾರಿ, ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಸರಿಪಡಿಸಬೇಕು’ ಎಂದು ಸಭೆಯಲ್ಲಿ ಮಾತನಾಡಿದ ಸದಸ್ಯರು ಒತ್ತಾಯಿಸಿದರು.

ಆಹಾರ ಇಲಾಖೆಯ ಶಿರಸ್ತೇದಾರ ಪುರುಷೋತ್ತಮ್ ಮಾತನಾಡಿ, ‘ಹೊಸ ಅರ್ಜಿ ಹಾಗೂ ತಿದ್ದುಪಡಿಗೆ ₹ 50 ಪಡೆಯಲಾಗುತ್ತಿದೆ. ಪಡಿತರ ಅಂಗಡಿ ಮಾಲೀಕರು ಬೆದರಿಕೆ ಹಾಕುವುದು, ತೂಕದಲ್ಲಿ ಮೋಸ ಮಾಡುವುದು ಕಂಡುಬಂದರೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.‌

’323751 ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಲಾಭಪಡೆಯುತ್ತಿದ್ದಾರೆ. ಬಾಕಿ ಇರುವ ಎರಡು ತಿಂಗಳ ಹಣವನ್ನು ಶೀಘ್ರವೇ  ಜಮೆ ಮಾಡಲಾಗುವುದು
ಆರತಿ, ಸಿಡಿಪಿಒ ಬೆಂಗಳೂರು ದಕ್ಷಿಣ ತಾಲ್ಲೂಕು

‘ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ, ಅರ್ಹ ಪಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ತಲುಪಿಸುತ್ತೇವೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಬಿಂದು ತಿಳಿಸಿದರು.

ಶಾಸಕರು ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲಾಗುವುದು. ಮುಂದೆ ಸಮಸ್ಯೆ ದೂರುಗಳು ಬಾರದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು
– ಶ್ರೀಧರ್ ಅಧ್ಯಕ್ಷ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಬೆಂಗಳೂರು ದಕ್ಷಿಣ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.