ಬೆಂಗಳೂರು:ಡಿಜಿಟಲ್ ವ್ಯವಸ್ಥೆ ಮೂಲಕ ನಡೆಯುವ ಬಿಟ್ಕಾಯಿನ್ ವ್ಯವಹಾರದ ಮೇಲೆ ಸಾಫ್ಟ್ವೇರ್ ಮೂಲಕ ಹಿಡಿತ ಸಾಧಿಸಿದ್ದ ಹ್ಯಾಕರ್ ಶ್ರೀಕೃಷ್ಣ, ಹಣ ವಿನಿಮಯ ಏಜೆನ್ಸಿಗಳ ಸರ್ವರ್ ಹಾಗೂ ಜಾಲತಾಣಗಳನ್ನು ಹ್ಯಾಕ್ ಮಾಡಿರುವುದು ತನಿಖೆಯಿಂದ ಬಯಲಾಗಿದೆ.
ಬಾಲ್ಯದಿಂದಲೇ ತಂತ್ರಜ್ಞಾನದಲ್ಲಿ ಚುರುಕಿದ್ದ ಶ್ರೀಕೃಷ್ಣ, ಪಿಯುಸಿಯಿಂದಲೇ ಬಿಟ್ಕಾಯಿನ್ ದೋಚಲಾರಂಭಿಸಿದ್ದ. ಇದಕ್ಕಾಗಿ ಆತ, ಸಾಫ್ಟ್ವೇರ್ವೊಂದನ್ನು ಖರೀದಿಸಿದ್ದ. ನಿಗದಿತ ಹಣವನ್ನು ಪಾವತಿಸಿ ಪರವಾನಗಿಯನ್ನೂ ಪಡೆದಿದ್ದ. ಅದೇ ಸಾಫ್ಟ್ವೇರ್ ಅನ್ನು ತನ್ನ ಲ್ಯಾಪ್ಟಾಪ್ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದ.
ಪ್ರತಿ ಬಾರಿ ಹ್ಯಾಕ್ ಮಾಡಿದಾಗಲೂ ಆರೋಪಿ ಇದೇ ಸಾಫ್ಟ್ವೇರ್ ಬಳಸಿದ್ದ. ಕಾಲೇಜು ದಿನಗಳಿಂದಲೂ ಇದೇ ಸಾಫ್ಟ್ವೇರ್ ಆತನ ಬಳಿ ಇತ್ತು. ಅದರ ನಡುವೆಯೇ ಆರೋಪಿಯ ಲ್ಯಾಪ್ಟಾಪ್ ಹಾಳಾಗಿತ್ತು. ಅವಾಗಲೇ ಆರೋಪಿ, ಬೇರೊಂದು ಸಾಫ್ಟ್ವೇರ್ ಖರೀದಿಸಿ ಕೃತ್ಯಕ್ಕೆ ಬಳಸಲಾರಂಭಿಸಿದ್ದ. ಅದಕ್ಕಾಗಿ, ಎರಡನೇ ಆರೋಪಿ ರಾಬಿನ್ ಖಂಡೇಲ್ವಾಲಾ ಹಾಗೂ ಇತರರ ಲ್ಯಾಪ್ಟಾಪ್ ಬಳಸಲಾರಂಭಿಸಿದ್ದ.
‘ಗಣಿತ ಸಮಸ್ಯೆಗಳನ್ನು ಚುರುಕಿನಿಂದ ಬಿಡಿಸುತ್ತಿದ್ದ ಶ್ರೀಕೃಷ್ಣ, ಡಿಜಿಟಲ್ ಅಂಕಿಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಪರಿಣತನಾಗಿದ್ದ. ಇದೇ ಕಾರಣಕ್ಕೆ ಆತ, ಪ್ರತಿಯೊಂದು ಸರ್ವರ್ ಹಾಗೂ ಜಾಲತಾಣಗಳನ್ನು ತ್ವರಿತವಾಗಿ ಹ್ಯಾಕ್ ಮಾಡುತ್ತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಸಾಫ್ಟ್ವೇರ್ ಮೂಲಕ ತನ್ನ ಅಸ್ತ್ರಗಳನ್ನು (ಬಗ್ ಹಾಗೂ ಇತರೆ) ಸರ್ವರ್ ಹಾಗೂ ಜಾಲತಾಣಕ್ಕೆ ಕಳುಹಿಸುತ್ತಿದ್ದ ಆರೋಪಿ, ಇಡೀ ಡಿಜಿಟಲ್ ವ್ಯವಸ್ಥೆಯನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುತ್ತಿದ್ದ. ನಂತರವೇ, ಹ್ಯಾಕಿಂಗ್ ಮಾಡಿ ಬಿಟ್ಕಾಯಿನ್ ದೋಚುತ್ತಿದ್ದ’ ಎಂದೂ ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.