ಕೆಂಗೇರಿ: ‘ದೇಹಕ್ಕಷ್ಟೇ ದಣಿವಾಗಿದೆ. ಮನಸ್ಸು, ತಲೆ ಈಗಲೂ ಸದೃಢವಾಗಿದೆ. ರಾಜ್ಯಕ್ಕೆ ಅನ್ಯಾಯವಾದರೆ ಮೇಜು ಕುಟ್ಟಿ ಪ್ರತಿಭಟಿಸುವೆ. ನನಗೆ ಯಾರ ಭಯವೂ ಇಲ್ಲ, ದಾಕ್ಷಿಣ್ಯವೂ ಇಲ್ಲ’ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳಿದರು.
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಶ್ರೀಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ 16ನೇ ದಿನದ ಪುಣ್ಯಾರಾಧನೆ ಮತ್ತು ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
‘ಒಕ್ಕಲಿಗ ಸಮಾಜಕ್ಕೆ ಕೈ ಚಾಚುವುದು ಗೊತ್ತಿಲ್ಲ. ಒಕ್ಕಲಿಗರ ಮತ್ತು ಬಡ, ದಲಿತ ಸಮಾಜದ ಏಳಿಗೆಗೆ ಆದಿ ಚುಂಚನಗಿರಿ ಮಠದ ಪೀಠಾಧಿಪತಿ ಬಾಲ ಗಂಗಾಧರನಾಥ ಸ್ವಾಮೀಜಿ ಶ್ರಮಿಸಿದ್ದರು. ನನ್ನ ಕಾಲಾವಧಿ ಮುಗಿಯುತ್ತಾ ಬಂದಿದೆ. ಆದಿ ಚುಂಚನಗಿರಿ ಮಠ ಹಾಗೂ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠಗಳು ಜಂಟಿಯಾಗಿ ದೀನ ದಲಿತರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಬೇಕು’ ಎಂದು ಮನವಿ ಮಾಡಿದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಸುಮಾರು ನಾಲ್ಕು ದಶಕಗಳ ಕಾಲ ಸಮುದಾಯದ ಮಠವೊಂದನ್ನು ಯಾವುದೇ ಗೊಂದಲಗಳಿಲ್ಲದೆ, ಆಪಾದನೆಗಳಿಲ್ಲದೆ ಮುನ್ನಡೆಸಿದ ಕೀರ್ತಿ ಚಂದ್ರಶೇಖರ ಸ್ವಾಮೀಜಿಗೆ ಸಲ್ಲುತ್ತದೆ’ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ. ಗೋಪಾಲ ಗೌಡ, ಹೈಕೋರ್ಟ್ ನ್ಯಾಯ ಮೂರ್ತಿ ಚಂದ್ರಶೇಖರಯ್ಯ, ಶಾಸಕ ಎಂ.ಕೃಷ್ಣಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.