ಬೆಂಗಳೂರು: ರಾಜ್ಯದ ಎಂಟು ಜಿಲ್ಲೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಎಂಡೆಮಿಕ್ (ಅಯೋ
ಡಿನ್ ಕೊರತೆ) ಜಿಲ್ಲೆಗಳು ಎಂದು ಗುರುತಿಸಿದ್ದು,ಅಯೋಡಿನ್ ಕೊರತೆ ಪ್ರಮಾಣವನ್ನು ಶೇ 5ಕ್ಕಿಂತ ಕಡಿಮೆ ಮಾಡುವ ಗುರಿ ಹಾಕಿಕೊಂಡಿದೆ.
ಅಯೋಡಿನ್ ಕೊರತೆಯಿಂದ ಆರೋಗ್ಯದಲ್ಲಿ ಕಾಣಿಸಿಕೊಳ್ಳುವ ನ್ಯೂನತೆಗಳ ನಿಯಂತ್ರಣ ಕುರಿತರಾಷ್ಟ್ರೀಯ ಕಾರ್ಯಕ್ರಮದಡಿ ಇಲಾಖೆ ಇದೇ 21ರಿಂದ 27ರವರೆಗೆ ರಾಜ್ಯದಾದ್ಯಂತ ‘ವಿಶ್ವ ಅಯೋಡಿನ್ ದಿನ ಹಾಗೂ ಜಾಗೃತಿ ಸಪ್ತಾಹ'ವನ್ನು ಏರ್ಪಡಿಸಿದೆ.
ಅಯೋಡಿನ್ ಕೊರತೆಯಿಂದ ಬುದ್ಧಿಮಾಂದ್ಯತೆ, ಕುಬ್ಜತನ, ಕಿವುಡುತನ, ಮೂಕತನ ಹಾಗೂ ಗಳಗಂಡ ಸೇರಿದಂತೆ ವಿವಿಧ ಸಮಸ್ಯೆ ಕಾಣಿಸಿಕೊಳ್ಳಲಿದೆ. ರಾಜ್ಯದಲ್ಲಿ ಅಯೋಡಿನ್ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಮನೆಯ ಮಟ್ಟದಲ್ಲಿ ಅಯೋಡಿನ್ಯುಕ್ತ ಉಪ್ಪಿನ ಬಳಕೆಯನ್ನು ಶೇ 100 ರಷ್ಟು ಖಚಿತಪಡಿಸುವ ಗುರಿಯನ್ನು ಇಲಾಖೆ ಹಾಕಿಕೊಂಡಿದೆ.
ದಕ್ಷಿಣ ಕನ್ನಡ, ಬಳ್ಳಾರಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯನ್ನು ಎಂಡೆಮಿಕ್ (ಅಯೋಡಿನ್ ಕೊರತೆ) ಜಿಲ್ಲೆಗಳು ಎಂದು ಗುರುತಿಸಲಾಗಿದೆ.
ಅಯೋಡಿನ್ ಕೊರತೆಯಿಂದ ಉಂಟಾಗುವ ನ್ಯೂನತೆ ಹಾಗೂ ಪರಿಣಾಮವನ್ನು ಸಮೀಕ್ಷೆ ಮಾಡುವುದು, ಸಾಮಾನ್ಯ ಉಪ್ಪಿನ ಬದಲು ಅಯೋಡಿನ್ಯುಕ್ತ ಉಪ್ಪು ಬಳಕೆ ಬಗ್ಗೆ ಅರಿವು ಮೂಡಿಸುವುದು, 5 ವರ್ಷಗಳಿಗೆ ಒಮ್ಮೆ ಸಮೀಕ್ಷೆ ಮಾಡುವುದು, ಮನೆಯ ಉಪ್ಪು ಪಡೆದು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸುವುದು, ಜಾಥಾ, ಶಾಲೆಗಳಲ್ಲಿ ಚರ್ಚಾ ಸ್ಪರ್ಧೆ, ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ, ಸಭೆ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.