ADVERTISEMENT

ಹೃದಯ ಸಮಸ್ಯೆ: ನಾಲ್ಕು ವರ್ಷದ ಬಾಲಕನಿಗೆ ಕಸಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 22:19 IST
Last Updated 21 ಜನವರಿ 2020, 22:19 IST

ಬೆಂಗಳೂರು: ಹೃದಯ ಸಮಸ್ಯೆ ಎದುರಿಸುತ್ತಿದ್ದ ನಾಲ್ಕು ವರ್ಷದ ಬಾಲಕನಿಗೆ ನಗರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೃದಯ ಕಸಿ ಮಾಡಿದ್ದಾರೆ.

ಕೊಲ್ಕತ್ತದ ಬಾಲಕ ಚಹಲ್ ಪಟ್ವಾರಿ ಎಂಬಾತ ಡಿಲೇಟೆಡ್ ಕಾರ್ಡಿಯೊಮಿಯೋಪತಿ (ಹೃದಯವು ದೊಡ್ಡದಾಗುವ ಜತೆಗೆ ರಕ್ತವನ್ನು ಕ್ರಮವಾಗಿ ಪಂಪ್ ಮಾಡಲು ಸಾಧ್ಯವಾಗದಿರುವುದು) ಸಮಸ್ಯೆಯಿಂದ ಎರಡು ವರ್ಷಗಳಿಂದ ಬಳಲುತ್ತಿದ್ದ. ಆತನಿಗೆ ಆಹಾರ ಸೇವನೆಯೂ ಕಷ್ಟವಾಗಿತ್ತು. ಬಾಲಕನನ್ನು ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಮಕ್ಕಳ ಹೃದ್ರೋಗ ಸಲಹಾ ತಜ್ಞ ಡಾ.ಶಶಿರಾಜ್ ಸುಬ್ರಹ್ಮಣ್ಯ ನೇತೃತ್ವದ ವೈದ್ಯರ ತಂಡ ಬಾಲಕನಿಗೆ ಹೃದಯ ಕಸಿಗೆ ಸೂಚಿಸಿತ್ತು.

2019ರ ಫೆಬ್ರುವರಿ ತಿಂಗಳಲ್ಲಿ ಅಂಗಾಂಗ ಕಸಿಗೆ ಜೀವಸಾರ್ಥಕತೆ ಯೋಜನೆಯಡಿ ಬಾಲಕನ ಹೆಸರನ್ನು ಪೋಷಕರು ನೋಂದಾಯಿಸಿದ್ದರು. ಬಾಲಕನಿಗೆ ಹೃದಯ ನೀಡಿದ ವ್ಯಕ್ತಿ 45 ವರ್ಷದವರಾಗಿದ್ದು, ಅವರು ಮಿದುಳು ರಕ್ತ ಸ್ರಾವದಿಂದ ಬಳಲುತ್ತಿದ್ದರು. ಹೆಬ್ಬಾಳದ‌ ಆಸ್ಟರ್ ಸಿಎಂಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2019ರ ಡಿ.21ರಂದು ಅವರ ಮಿದುಳು ನಿಷ್ಕ್ರಿಯ ಗೊಂಡಿರುವುದನ್ನು ವೈದ್ಯರು ಪ್ರಕಟಿಸಿದರು. ಅವರ ಕುಟುಂಬ ಅಂಗಾಂಗ ದಾನಕ್ಕೆ ಒಪ್ಪಿಕೊಂಡಿತು.

ADVERTISEMENT

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಡಾ.ಶಶಿರಾಜ್ ಸುಬ್ರಹ್ಮಣ್ಯ ಮಾತನಾಡಿ, ‘ರಾಜ್ಯದಲ್ಲಿ ಅತಿ ಕಿರಿಯ ವ್ಯಕ್ತಿಗೆ ಹೃದಯ ಕಸಿ ಮಾಡಿದ ಹೆಗ್ಗಳಿಕೆ ನಮ್ಮದಾಗಿದೆ. ಬಾಲಕ ನಾಲ್ಕನೇ ಹಂತದ ಹೃದಯ ವೈಫಲ್ಯದಿಂದ ಬಳಲುತ್ತಿದ್ದ. ಆತನ ಆರೋಗ್ಯ ಸ್ಥಿತಿಯನ್ನು ಸ್ಥಿರವಾಗಿಸುವುದು ಸವಾಲಾಗಿತ್ತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.