ಬೆಂಗಳೂರು: ಎಡ ಹೃತ್ಕುಕ್ಷಿ ಊದಿಕೊಂಡ ಸಮಸ್ಯೆಯಿಂದ (ವೆಂಟ್ರಿಕ್ಯುಲರ್ ಹೈಪರ್ಥ್ರೋಪಿ–ಎಲ್ವಿಎಚ್) ಬಳಲುತ್ತಿದ್ದ ಬಿಬಿಎಂಪಿ ಆರೋಗ್ಯ ನಿರೀಕ್ಷಕನಿಗೆತುಮಕೂರಿನ ಯುವಕರೊಬ್ಬರು ಹೃದಯ ದಾನ ಮಾಡಿ, ಜೀವ ಉಳಿಸಿದ್ದಾರೆ.
ನಾರಾಯಣ ಹೆಲ್ತ್ನ ಎಂ.ಎಸ್.ರಾಮಯ್ಯ ನಾರಾಯಣ ಹೃದಯ ಕೇಂದ್ರದಲ್ಲಿ ಬುಧವಾರ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಹೃದಯ ದಾನ ಮಾಡಿದ ಯುವಕಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಗ್ರಾಮದ ಮೋದಪ್ಪನಹಳ್ಳಿಯವರು.ಫೆ.10ರಂದು ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನುತುಮಕೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಯಶವಂತಪುರದ ಸ್ಪರ್ಶ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಂಗಳವಾರ ಸಂಜೆ ಹೊತ್ತಿಗೆ ಯುವಕನ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ತಿಳಿಸಿದರು.
ಹೃದಯ ದಾನಕ್ಕೆ ಅವರ ಕುಟುಂಬ ಒಪ್ಪಿಗೆ ನೀಡಿದ ಬಳಿಕ ಈ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.ಆರೋಗ್ಯ ನಿರೀಕ್ಷಕನಿಗೆ ಬೈವೆಂಟ್ರಿಕ್ಯುಲರ್ ಅಸಿಸ್ಟ್ ಡಿವೈಸ್ (ಕೃತಕ ಹೃದಯ) ಅಳವಡಿಸಲಾಗಿದ್ದು, ಎಂ.ಎಸ್.ರಾಮಯ್ಯ ನಾರಾಯಣ ಹೃದಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ತಜ್ಞರ ಸಲಹೆ ಮೇರೆಗೆ ಅವರಿಗೆ ಹೃದಯ ಕಸಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಗಿತ್ತು.
ಹೃದಯ ಕಸಿತಜ್ಞ ಡಾ.ಯು.ಎಂ ನಾಗಮಲ್ಲೇಶ್, ಹಿರಿಯ ಸಲಹಾ ತಜ್ಞ ಡಾ.ರವಿಶಂಕರ್ ಶೆಟ್ಟಿ ಹೃದಯ ಹೊರತೆಗೆಯುವ ಮತ್ತು ಮರು ಅಳವಡಿಸುವ ಶಸ್ತ್ರಚಿಕಿತ್ಸಾ ಕಾರ್ಯವನ್ನು ಯಶಸ್ವಿಗೊಳಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.