ADVERTISEMENT

ಬೆಂಗಳೂರು ನಗರದಲ್ಲಿ ಗಾಳಿ ಸಹಿತ ಮಳೆ: ಉರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 20:21 IST
Last Updated 22 ಮಾರ್ಚ್ 2022, 20:21 IST
ನಗರದ ಅವೆನ್ಯೂ ರಸ್ತೆಯಲ್ಲಿ ಸುರಿವ ಮಳೆಯಲ್ಲೇ ಸಾರ್ವಜನಿಕರು ನಡೆದುಕೊಂಡು ಹೋದರು        – ಪ್ರಜಾವಾಣಿ ಚಿತ್ರಗಳು
ನಗರದ ಅವೆನ್ಯೂ ರಸ್ತೆಯಲ್ಲಿ ಸುರಿವ ಮಳೆಯಲ್ಲೇ ಸಾರ್ವಜನಿಕರು ನಡೆದುಕೊಂಡು ಹೋದರು – ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ನಗರದಲ್ಲಿ ಹಲವೆಡೆ ಮಂಗಳವಾರವೂ ಗಾಳಿ ಸಹಿತ ಜೋರು ಮಳೆ ಸುರಿಯಿತು. ಮೂರು ಕಡೆಗಳಲ್ಲಿ ಮರಗಳು ಉರುಳಿಬಿದ್ದಿದ್ದವು.

ಬಂಗಾಳ ಕೊಲ್ಲಿಯಲ್ಲಿ ಬೀಸುತ್ತಿರುವ ಚಂಡಮಾರುತದಿಂದಾಗಿ ನಾಲ್ಕು ದಿನ ಗಳಿಂದ ನಗರದಲ್ಲಿ ಬಿಡುವು ಕೊಡುತ್ತ ಮಳೆಯಾಗುತ್ತಿದೆ.

ಮಂಗಳವಾರ ಬೆಳಿಗ್ಗೆ ಬಿಸಿಲು ಕಾಣಿಸಿಕೊಂಡರೂ, ನಂತರ ತಂಪು ಗಾಳಿ ಬೀಸುತ್ತಿತ್ತು. ಹಲವೆಡೆ ಮಧ್ಯಾಹ್ನ ಹಾಗೂ ಸಂಜೆ ಜೋರು ಗಾಳಿ ಸಹಿತ ಮಳೆ ಆಯಿತು. ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ನೀರು ಹರಿಯಿತು. ಕೆಲವೆಡೆ ನೀರಿನಲ್ಲೇ ಪಾದಚಾರಿಗಳು ನಡೆದುಕೊಂಡು ಹೋದ ದೃಶ್ಯಗಳು ಕಂಡುಬಂದವು.

ADVERTISEMENT

ಮೆಜೆಸ್ಟಿಕ್, ಗಾಂಧಿನಗರ, ಚಿಕ್ಕಪೇಟೆ, ಕಲಾಸಿಪಾಳ್ಯ, ಸಿಟಿ ಮಾರ್ಕೆಟ್, ಶಿವಾಜಿನಗರ, ಅಶೋಕ ನಗರ, ಕೋರಮಂಗಲ, ಮಡಿವಾಳ, ಜಯನಗರ, ಬಸವನಗುಡಿ, ಬನ ಶಂಕರಿ, ಹನುಮಂತನಗರ, ಗಿರಿನಗರ, ಕೆಂಗೇರಿ, ರಾಜರಾಜೇಶ್ವರಿನಗರ, ದೀಪಾಂಜಲಿನಗರ, ವಿಜಯನಗರ, ರಾಜಾಜಿನಗರ, ಯಶವಂತಪುರ, ಪೀಣ್ಯ, ಮಲ್ಲೇಶ್ವರ, ಶೇಷಾದ್ರಿಪುರ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ ಸೇರಿ ಹಲವೆಡೆ ಮಳೆ ಸುರಿಯಿತು.

ಬಹುತೇಕ ಕಡೆ ಕಾಲುವೆಯಲ್ಲಿ ಹೂಳು ತುಂಬಿಕೊಂಡಿತ್ತು. ಹೀಗಾಗಿ, ನೀರು ರಸ್ತೆ ಮೇಲೆ ಹರಿಯಿತು. ಕೆಲವೆಡೆ ಬಿಬಿಎಂಪಿ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು, ಕಾಲುವೆಯಲ್ಲಿದ್ದ ಹೂಳು ತೆಗೆದು ನೀರು ಹರಿದು ಹೋಗುವಂತೆ ಮಾಡಿದರು.

ಸಂಜೆ ವೇಳೆಯಲ್ಲೇ ಮಳೆ ಜೋರಾ ಗಿತ್ತು. ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಕೆಲ ಸಾರ್ವಜನಿಕರು ಪರಿತಪಿಸಿದರು. ಮೆಜೆಸ್ಟಿಕ್ ರೈಲ್ವೆ ಕೆಳಸೇತುವೆ ಹಾಗೂ ಓಕಳಿಪುರ ಕೆಳಸೇತುವೆಯಲ್ಲಿ ನೀರು ಹರಿದಿದ್ದರಿಂದ, ವಾಹನಗಳು ನಿಧಾನಗತಿಯಲ್ಲಿ ಸಂಚರಿಸಿದವು. ದಟ್ಟಣೆಯೂ ಉಂಟಾಗಿತ್ತು.

ಉರುಳಿದ ಮರ: ‘ಜೋರು ಗಾಳಿ ಯಿಂದಾಗಿಹಂಪಿನಗರ ಬಳಿಯ ಆರ್‌.ಪಿ.ಸಿ ಬಡಾವಣೆ, ಅತ್ತಿಗುಪ್ಪೆ ಸಮೀಪದ ಬಿ.ಸಿ.ಸಿ ಬಡಾವಣೆ ಹಾಗೂ ಗಿರಿ ನಗರದಲ್ಲಿ ಮರಗಳು ಉರುಳಿಬಿದ್ದಿದ್ದು, ಅವುಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.