ADVERTISEMENT

ಬೆಂಗಳೂರಿನಲ್ಲಿ ಮಳೆ ಅಬ್ಬರ: ಹೊಳೆಯಂತಾದ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 22:30 IST
Last Updated 4 ನವೆಂಬರ್ 2021, 22:30 IST
ಹೊಳೆಯಂತಾದ ರಸ್ತೆಗಳು
ಹೊಳೆಯಂತಾದ ರಸ್ತೆಗಳು   

ಬೆಂಗಳೂರು: ನಗರದಲ್ಲಿ ಗುರುವಾರ ರಾತ್ರಿ ಜೋರು ಮಳೆ ಸುರಿದಿದ್ದು, ಬಹುತೇಕ ಕಡೆ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು. ಕಾಟನ್‌ಪೇಟೆಯ ಛಲವಾದಿ ಪಾಳ್ಯದ ಕೆಲ ಮನೆಗಳಿಗೆ ನೀರು ನುಗ್ಗಿತ್ತು.

ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ, ಮೋಡ ಕವಿದ ವಾತಾವರಣದಿಂದಾಗಿ ಆಗಾಗ ಮುನ್ಸೂಚನೆ ನೀಡುತ್ತಿತ್ತು. ಗುರುವಾರವೂ ಬೆಳಿಗ್ಗೆಯಿಂದ ನಗರದ ಹಲವೆಡೆ ಬಿಸಿಲು ಇತ್ತು. ನಂತರ, ಮೋಡ ಕವಿದ ವಾತಾವರಣವೂ ಕಾಣಿಸಿಕೊಂಡಿತ್ತು.

ನಗರದ ಹಲವೆಡೆ ಸಂಜೆಯಿಂದಲೇ ಜಿಟಿ ಜಿಟಿ ಮಳೆ ಸುರಿಯಲಾರಂಭಿಸಿತ್ತು. ಬಹುತೇಕ ಕಡೆ ರಾತ್ರಿ ಮಳೆ ಅಬ್ಬರಿಸಿ ಸುರಿಯಿತು, ಎರಡು ಗಂಟೆ ನಿರಂತರವಾಗಿ ಸುರಿದ ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ನೀರು ಧಾರಾಕಾರವಾಗಿ ಹರಿಯಿತು.

ADVERTISEMENT

ರಾಜಾಜಿನಗರ, ವಿಜಯನಗರ, ದೀಪಾಂಜಲಿನಗರ, ರಾಜರಾಜೇಶ್ವರಿ ನಗರ, ಕೆಂಗೇರಿ, ಗಿರಿನಗರ, ಹೊಸಕೆರೆಹಳ್ಳಿ, ಹನುಮಂತನಗರ, ಚಾಮರಾಜಪೇಟೆ, ಮೆಜೆಸ್ಟಿಕ್, ಗಾಂಧಿನಗರ, ಚಿಕ್ಕಪೇಟೆ, ಶೇಷಾದ್ರಿಪುರ, ಮಲ್ಲೇಶ್ವರ, ಯಶವಂತಪುರ, ಪೀಣ್ಯ, ದಾಸರಹಳ್ಳಿ, ಗೊರಗುಂಟೆಪಾಳ್ಯ ಹಾಗೂ ಸುತ್ತಮುತ್ತ ಮಳೆ ಅಬ್ಬರ ಹೆಚ್ಚಿತ್ತು.

ಎಂ.ಜಿ. ರಸ್ತೆ, ಅಶೋಕನಗರ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ, ವಿವೇಕನಗರ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಉತ್ತಮ ಮಳೆ ಆಯಿತು.

ದೀಪಾವಳಿ ಹಬ್ಬದ ಆಚರಣೆಯಲ್ಲಿದ್ದ ಜನ, ಅಗತ್ಯ ವಸ್ತುಗಳ ಖರೀದಿ
ಗಾಗಿ ಮಾರುಕಟ್ಟೆಗಳಿಗೆ ಬಂದಿದ್ದರು. ಇದೇ ಸಂದರ್ಭದಲ್ಲೇ ಮಳೆ ಸುರಿಯಲಾರಂಭಿಸಿತ್ತು. ಪ್ರತಿಯೊಂದು ಅಂಗಡಿ ಹಾಗೂ ಮಳಿಗೆಗಳಲ್ಲಿ ಜನರು
ಆಶ್ರಯ ಪಡೆದಿತ್ತು ಕಂಡುಬಂತು.

ರಸ್ತೆಯ ಅಕ್ಕ–ಪಕ್ಕದಲ್ಲಿ ವಾಹನ ನಿಲ್ಲಿಸಿದ್ದ ಸವಾರರು ಸಹ ಮಳಿಗೆಗಳಲ್ಲಿ ಆಶ್ರಯ ಪಡೆದಿದ್ದರು. ಸುರಿವ ಮಳೆಯಲ್ಲೇ ಕಾರು, ಬಸ್‌ ಹಾಗೂ ಇತರೆ ವಾಹನಗಳು ಸಂಚರಿಸಿದವು. ಕೆಲ ವಾಹನಗಳು ಕೆಟ್ಟು ನಿಂತಿದ್ದವು.

ಶಿವಾನಂದ ವೃತ್ತದ ಕೆಳ ಸೇತುವೆ ಹಾಗೂ ಮೆಜೆಸ್ಟಿಕ್ ಕೆಳ ಸೇತುವೆಯಲ್ಲಿ ನೀರು ಹರಿಯುವಿಕೆ ಹೆಚ್ಚಿತ್ತು. ಅದರಲ್ಲೇ ವಾಹನಗಳು ಸಂಚರಿಸಿದವು. ಕೆಲ ವಾಹನಗಳು ಕೆಟ್ಟು ನಿಂತಿದ್ದ ದೃಶ್ಯಗಳೂ ಕಾಣಿಸಿದವು.

ಛಲವಾದಿಪಾಳ್ಯದ ಕೆಲವೆಡೆ ಒಳರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯಿತು. ಅದೇ ನೀರು ಮನೆಗಳಿಗೆ ನುಗ್ಗಿತ್ತು. ನಿವಾಸಿಗಳು, ರಾತ್ರಿಯೀರಿ ನೀರು ಹೊರಹಾಕಿದರು.

‘ಗುರುವಾರ ಸಂಜೆಯಿಂದ ರಾತ್ರಿಯವರೆಗೂ ನಗರದಲ್ಲಿ ಉತ್ತಮ ಮಳೆ ಆಗಿದೆ. ರಸ್ತೆಯಲ್ಲಿ ನೀರು ಹರಿಯುತ್ತಿದ್ದ ಹಾಗೂ ಮರದ ಕೊಂಬೆಗಳು ಬಿದ್ದಿದ್ದ ದೂರುಗಳು ಬಂದಿದ್ದವು. ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಸರಿಪಡಿಸಲಾಗಿದೆ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ಮೈದಾನಕ್ಕೆ ನೀರು: ರಾಜಾಜಿನಗರದ ರಾಮಮಂದಿರ ಮೈದಾನದಲ್ಲಿ ನೀರು ನುಗ್ಗಿತ್ತು. ದೀಪಾವಳಿ ಹಬ್ಬಕ್ಕೆಂದು ಮೈದಾನದಲ್ಲಿ ಪಟಾಕಿ ಮಳಿಗೆ ತೆರೆಯಲಾಗಿತ್ತು. ಮಳಿಗೆಗಳಿಗೆ ನೀರು ನುಗ್ಗಿ, ಪಟಾಕಿಗಳು ತೊಯ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.