ಕೆ.ಆರ್.ಪುರ: ಮಾರತಹಳ್ಳಿ ದೀಪಾ ನರ್ಸಿಂಗ್ ಹೋಂ ಬಳಿ ರಾಜಕಾಲುವೆಗೆ ಹೊಂದಿಕೊಂಡಿರುವ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. 5ನೇ ಅಡ್ಡರಸ್ತೆಯಲ್ಲಿ ಕೆಲ ಮನೆಗಳಲ್ಲಿ ನಿತ್ಯ ಬಳಕೆಯ ವಸ್ತುಗಳು, ದಿನಸಿ ಪದಾರ್ಥಗಳು ಹಾಳಾದವು.
‘ಸುಮಾರು 12 ವರ್ಷದಿಂದ ಈ ಪ್ರದೇಶದಲ್ಲಿ ಸಮಸ್ಯೆಯಿದೆ. ಸ್ವಲ್ಪ ಪ್ರಮಾಣದ ಮಳೆ ಬಿದ್ದರು ನೀರು ಬರುತ್ತಿದೆ. ಹಾವು, ಚೇಳುಗಳಿಂದ ಜೀವಾಪಾಯವಿದೆ. ಇದರ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಕೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ರಮೇಶ್ ಆರೋಪಿಸಿದರು.
ಚಿಕ್ಕಬನಹಳ್ಳಿ ಕೆರೆ ಕೋಡಿ ಬಿದ್ದಿದ್ದರಿಂದಾಗಿ ರಸ್ತೆ ಜಲಾವೃತವಾಗಿದ್ದು, ಸವಾರರು ಪರದಾಡಿದರು. ಪಂಚಾಯಿತಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ಸರ್ವೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಸಮ್ಮುಖದಲ್ಲಿ ಸರ್ವೆ ಮಾಡಿ ರಾಜಕಾಲುವೆ ಗುರುತಿಸಿ ಒತ್ತುವರಿ ತೆರವು ಮಾಡಲು ಮುಂದಾದರು.
ರಾಮಮೂರ್ತಿನಗರ ಮುಖ್ಯರಸ್ತೆಯ ಚರ್ಚ್ ಬಳಿ ರಸ್ತೆಯಲ್ಲೂ ಸಮಸ್ಯೆ ಕಾಡಿತು. ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ಲಕ್ಷ್ಮಣಮೂರ್ತಿನಗರ ಕೆರೆಯಿಂದ ಕೌದೇನಹಳ್ಳಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯು ಪೂರ್ಣ ಪ್ರಮಾಣದಲ್ಲಿ ಒತ್ತುವರಿ ಆಗಿರುವುದು ಈ ಸಮಸ್ಯೆಗೆ ಮುಖ್ಯವಾದ ಕಾರಣವಾಗಿದೆ.
ರಾಮಮೂರ್ತಿನಗರ ಮುಖ್ಯರಸ್ತೆ ಹಾಗೂ ಐಟಿಐಗೆ ಹೋಗುವ ರಸ್ತೆಯಲ್ಲಿ ‘ಚರ್ಚ್ ಹಾಗೂ ಅಂಗಡಿಗಳನ್ನು ರಾಜಕಾಲುವೆ ಮೇಲೇ ಕಟ್ಟಿ ನೀರು ಹೋಗದಂತೆ ಮಾಡಲಾಗಿದೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.