
ಬೆಂಗಳೂರು: ಹೆಬ್ಬಾಳ ಜಂಕ್ಷನ್ ಬಳಿ ನಿರ್ಮಿಸುತ್ತಿದ್ದ ಹೊಸ ಲೂಪ್ (ಪಥ) ಕಾಮಗಾರಿ ಮುಕ್ತಾಯವಾಗಿದ್ದು, ಶನಿವಾರ ರಾತ್ರಿಯಿಂದಲೇ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ಹೊಸ ಲೂಪ್ ವಿಮಾನ ನಿಲ್ದಾಣ ಕಡೆಯಿಂದ ಹೆಬ್ಬಾಳ ಮೇಲ್ಸೇತುವೆ ಮೂಲಕ ನಗರ ಪ್ರವೇಶಿಸಲು ನೆರವಾಗಲಿದೆ. ಯಲಹಂಕ, ಜಕ್ಕೂರು, ಸಹಕಾರ ನಗರ ಕಡೆಯಿಂದ ಮೇಖ್ರಿ ಸರ್ಕಲ್ವರೆಗೆ ತಡೆರಹಿತವಾಗಿ ಸಂಚರಿಸಬಹುದಾಗಿದೆ.
‘ನಾಗವಾರ– ಕೆ.ಆರ್. ಪುರ ಕಡೆಯಿಂದ ಬರುವ ವಾಹನಗಳಿಗೆ ಪ್ರತೇಕವಾದ ಲೂಪ್ ಇದೆ. ಈಗ ವಿಮಾನ ನಿಲ್ದಾಣದಿಂದ ಮೇಖ್ರಿ ಸರ್ಕಲ್ ಕಡೆಗೆ ಬರುವ ವಾಹನಗಳಿಗೂ ಪಥ ನಿರ್ಮಿಸಿದ್ದು, ಇದರಿಂದ ಸಂಚಾರ ದಟ್ಟಣೆ ಕಡಿಮೆ ಆಗುವ ನಿರೀಕ್ಷೆ ಇದೆ’ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
‘ಹೊಸ ಪಥದ ಕಾಮಗಾರಿ ಪೂರ್ಣಗೊಂಡಿದ್ದು, ಸುರಕ್ಷತಾ ಪರಿಶೀಲನೆ ಕಾರ್ಯವೂ ಮುಗಿದಿದೆ. ಪ್ರಾಯೋಗಿಕವಾಗಿ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಗಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.