ಬೆಂಗಳೂರು: ಹರ್ಬಲ್ ಔಷಧಿ ನೀಡುವುದಾಗಿ ಹೇಳಿ ನಗರದ ನಿವಾಸಿ ದಾನಸಿಂಗ್ ಎಂಬುವರಿಂದಶಂಕರ್ ಪಾಡಿಯನ್ ಎಂಬಾತ ₹ 3.05 ಲಕ್ಷ ಪಡೆದುವಂಚಿಸಿರುವ ಬಗ್ಗೆ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಇದೇ ಏಪ್ರಿಲ್ 28ರಂದು ಪರಿಚಯವಾಗಿದ್ದ ಶಂಕರ್, ಹರ್ಬಲ್ ಔಷಧಿ ಸೇವಿಸಿದರೆ ರಕ್ತದೊತ್ತಡ ಹಾಗೂ ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆಂದು ಹೇಳಿ ನಂಬಿಸಿ ಹಣ ಪಡೆದು ವಂಚಿಸಿದ್ದಾರೆ’ ಎಂದು ದಾನಸಿಂಗ್ ದೂರು ನೀಡಿದ್ದಾರೆ.
ಖಾಲಿ ಹಾಳೆ ಕಳುಹಿಸಿದ: ‘ಇಂಗ್ಲೆಂಡ್ನಿಂದ ಬಂದಿರುವುದಾಗಿ ಹೇಳಿದ್ದ ಆರೋಪಿ, ತಾನು ಹಲವರಿಗೆ ಹರ್ಬಲ್ ಔಷಧಿ ಕೊಟ್ಟಿರುವುದಾಗಿ ತಿಳಿಸಿದ್ದ. ಕೆಲವರ ಮೊಬೈಲ್ ನಂಬರ್ ಸಹ ಕೊಟ್ಟಿದ್ದ. ಅದಕ್ಕೆ ದೂರುದಾರರು ಕರೆ ಮಾಡಿದಾಗ, ಹರ್ಬಲ್ ಔಷಧಿಯಿಂದ ಒಳ್ಳೆಯದಾಗಿದೆ ಎಂಬ ಅಭಿಪ್ರಾಯ ಬಂದಿತ್ತು’ ಎಂದು ಪೊಲೀಸರು ಹೇಳಿದರು.
‘ಆರೋಪಿಯ ಮಾತು ನಂಬಿದ್ದ ದೂರುದಾರ, ಆತ ಹೇಳಿದಂತೆ ₹ 3.05 ಲಕ್ಷವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಆರೋಪಿಯು ಕೋರಿಯರ್ ಕಳುಹಿಸಿದ್ದ. ಅದನ್ನು ಬಿಚ್ಚಿ ನೋಡಿದಾಗ ಖಾಲಿ ಹಾಳೆಗಳು ಇದ್ದವು’ ಎಂದು ವಿವರಿಸಿದರು.‘ಆರೋಪಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆತ ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.