ಹೆಸರಘಟ್ಟ: ಬಿಸಿಲಿನ ತಾಪಕ್ಕೆ ಹೆಸರಘಟ್ಟ ಕೆರೆಯ ನೀರು ಬತ್ತಿ ಹೋಗುತ್ತಿದ್ದು ಸಾವಿರಾರು ಮೀನಿನ ಮರಿಗಳು ಸಾಯುತ್ತಿವೆ.
ಕೆರೆಯಲ್ಲಿ ನೀರು ಇದ್ದಾಗಮೀನುಗಾರಿಕೆ ಇಲಾಖೆಯು ಸಾವಿರಾರು ಮೀನುಗಳನ್ನು ಕೆರೆಗೆ ಬಿಟ್ಟಿತ್ತು. ಬಗಡೆ, ತೋರಿ, ಗ್ರಾಸ್ ಕಾರ್ಪ್ ಜಾತಿಯ ಮೀನುಗಳ ಸಂತತಿಯನ್ನು ಅಭಿವೃದ್ಧಿ ಪಡಿಸಿತ್ತು. ಬಲೆ ಹಾಕಿ ಹಿಡಿಯುವಷ್ಟು ಮೀನುಗಳು ಇಲ್ಲಿದ್ದವು. ‘ಜನರು ಬೆಳಿಗ್ಗೆ ಬಲೆಗಳನ್ನು ಹಾಕಿ ಸಂಜೆ ಬಲೆ ತೆಗೆಯುತ್ತಿದ್ದರು. ದಿನಕ್ಕೆ ಮೂವತ್ತರಿಂದ ನಲವತ್ತು ಕೆ.ಜಿ. ಮೀನು ಇಲ್ಲಿ ಸಿಗುತ್ತಿದ್ದವು’ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.
ತಿಂಗಳಿನಿಂದ ಬಿಸಿಲಿನ ತಾಪ ಏರಿಕೆಯಾಗಿ ಕೆರೆಯ ನೀರು ಆವಿಯಾಗುತ್ತಿದೆ. ನೀರಿಲ್ಲದೆ ಮೀನುಗಳಿಗೆ ಆಮ್ಲಜನಕದ ಕೊರತೆ ಉಂಟಾಗಿ ಸಾವನ್ನಪ್ಪುತ್ತಿವೆ. ಎರಡು ಸಾವಿರ ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕೆರೆಯಲ್ಲಿ ಲಕ್ಷಾಂತರ ಮೀನಿನ ಮರಿಗಳು ಸತ್ತಿರಬಹುದು ಎಂದು ಅಂದಾಜಿಸಲಾಗಿದೆ.
ಸತ್ತ ಮೀನುಗಳಿಂದ ಗಬ್ಬುವಾಸನೆ ಬರುತ್ತಿದೆ. ಮೀನುಗಳನ್ನು ಆಯ್ದುತಿನ್ನಲು ರಣಹದ್ದುಗಳು ಹೆಚ್ಚು ಬರುತ್ತಿವೆ.
‘ಸತ್ತ ಮೀನುಗಳ ವಾಸನೆಯಿಂದಾಗಿ ಸಂಜೆ ವೇಳೆ ವಾಯುವಿಹಾರ ಮಾಡಲು ಸಹ ಆಗುತ್ತಿಲ್ಲ’ ಎಂದು ಗ್ರಾಮದ ನಿವಾಸಿ ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ಜಲಮಂಡಳಿಯ ಸಹಾಯಕ ಎಂಜಿನಿಯರ್ ಕೃಷ್ಣಗೌಡ,‘ಸಣ್ಣ ಗಾತ್ರದ ಮೀನುಗಳು ಸತ್ತಿವೆ. ಸತ್ತ ಮೀನುಗಳನ್ನು ತೆಗೆದು ಕೆರೆ ಸ್ವಚ್ಚ ಮಾಡುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.