ADVERTISEMENT

ದಾಸನೇಹಳ್ಳಿ: ಬೆಸ್ಕಾಂ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 19:53 IST
Last Updated 13 ನವೆಂಬರ್ 2018, 19:53 IST
ಬೆಸ್ಕಾಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ದಾಸನೇಹಳ್ಳಿ ಗ್ರಾಮಸ್ಥರು
ಬೆಸ್ಕಾಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ದಾಸನೇಹಳ್ಳಿ ಗ್ರಾಮಸ್ಥರು   

ಬೆಂಗಳೂರು: ಹೆಸರಘಟ್ಟ ಹೋಬಳಿ ದಾಸನೇಹಳ್ಳಿ ಗ್ರಾಮಸ್ಥರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಸಹಾಯಕ ಎಂಜಿನಿಯರ್‌ ಕಿರಣ್ ಕುಮಾರ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಗ್ರಾಮದ ನಿವಾಸಿಯಾದ ಗಂಗರಾಜು ಅವರು ಕಳೆದ ಐದಾರು ತಿಂಗಳಿನಿಂದ ವಿದ್ಯುತ್ ಸಂಪರ್ಕಕ್ಕಾಗಿ ಅಲೆದಾಡುತ್ತಿದ್ದಾರೆ. ಪ್ರತಿನಿತ್ಯ ಒಂದೊಂದು ಕಾರಣವನ್ನು ಬೆಸ್ಕಾಂ ಸಿಬ್ಬಂದಿ ನೀಡುತ್ತಿದ್ದಾರೆ. ಲೇಔಟ್ ಮಾಡುವವರಿಗೆ ಒಂದು ವಾರದಲ್ಲಿ ಮೀಟರ್ ಕೊಡುತ್ತಾರೆ. ಬಡವರಿಗೆ ವರ್ಷವಾದರೂ ವಿದ್ಯುತ್ ಸಂಪರ್ಕ ಕೊಡುವುದಿಲ್ಲ. ಬಡವರ ಹತ್ತಿರ ಸಹಾಯಕ ಎಂಜಿನಿಯರ್‌ ಲಂಚ ಕೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ದಾಸನೇಹಳ್ಳಿ ಗ್ರಾಮದಲ್ಲಿ ಮುರಿದ ವಿದ್ಯುತ್ ಕಂಬವನ್ನು ಕೈಗೆಟುಕುವ ಮಟ್ಟದಲ್ಲಿ ನಿಲ್ಲಿಸಿದ್ದಾರೆ. ಗ್ರಾಮಸ್ಥರು ರಸ್ತೆಯಲ್ಲಿ ಜೀವಭಯದಿಂದ ತಿರುಗಾಡುವಂತೆ ಆಗಿದೆ. ಒಂದು ವರ್ಷದಿಂದ ಈ ಸಮಸ್ಯೆ ಬಗೆಹರಿಸಿಕೊಡುವಂತೆ ಬೆಸ್ಕಾಂಗೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಆದರೆ ಸಿಬ್ಬಂದಿ ನಿರ್ಲಕ್ಷ ತೋರಿಸುತ್ತಿದ್ದಾರೆ. ಇದರಿಂದ ಕಳೆದ ವರ್ಷ ಇಬ್ಬರು ಪ್ರಾಣ ಕಳೆದುಕೊಂಡರು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸ್ಥಳಕ್ಕೆ ಆಗಮಿಸಿದ ಸಹಾಯಕ ಎಂಜಿನಿಯರ್‌ ಕಿರಣ್ ಕುಮಾರ್‌, ‘ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.